ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಪ್ರದೇಶದ ವಿಶೇಷ ಮೀಸಲಾತಿ-371 ಕಲಂ ಜೆ ಸಂಪೂರ್ಣ ಅನುಷ್ಠಾನಕ್ಕೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿಯು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಯತ್ನಿಸಿದ 20ಕ್ಕೂ ಅಧಿಕ ಹೋರಾಟಗಾರರನ್ನು ಪೋಲಿಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಆಧುನಿಕ ಉದ್ಯಮದ ತೊಟ್ಟಿಲು – ರಾಜ್ಯೋತ್ಸವಕ್ಕೆ ಶುಭಕೋರಿದ ಮೋದಿ, ಸಿಎಂ
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ನರಿಬೋಳ, ಕಲ್ಯಾಣ ಕರ್ನಾಟಕ ಪ್ರದೇಶದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನೂಕೂಲವಾಗಬೇಕಿದ್ದ ಹಲವಾರು ಯೋಜನೆಗಳು ಧಾರವಾಡ ಹಾಗೂ ಇತರೇ ಕಡೆ ಸ್ಥಳಾಂತರ ಆಗುತ್ತಿವೆ. ಈ ಭಾಗದ ಅಭಿವೃದ್ಧಿ ಬಗ್ಗೆ ಹೇಳೋರು ಕೇಳೋರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪ್ರದೇಶದ ಪ್ರತಿಭಾವಂತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಕಾವೇರಿ ವಿಚಾರದಲ್ಲಿ ತೋರುವ ಕಾಳಜಿ ಮತ್ತು ಆಸಕ್ತಿ ನಮ್ಮ ಭೀಮಾ ಮತ್ತು ಕ್ರಷ್ಣೆಗೆ ಏಕಿಲ್ಲ ಎಂದು ಪ್ರಶ್ನಿಸಿದ ಅವರು, 371 ಕಲಂ ಜೆ ಕೋಶವನ್ನು ಕಲಬುರಗಿಯಲ್ಲಿ ಸ್ಥಾಪಿಸದೇ ಬೆಂಗಳೂರಿನಲ್ಲಿಟ್ಟಿದ್ದಾರೆ ಎಂದರು. ಇದನ್ನೂ ಓದಿ: ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ
ಕ.ಕ. ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಲ್ಲ. ಪ್ರದೇಶದಲ್ಲಿ ಬರಗಾಲ ಬಿದ್ದು ರೈತರು ಕಷ್ಟದಲ್ಲಿದ್ದರು ಸಹ ತಿರುಗಿ ನೋಡದ ಸರ್ಕಾರಗಳು, ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಸುಮ್ಮನೆ ಕೂತಿರುವುದರಲ್ಲಿ ಅರ್ಥವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕುಮಾರ ಜನವಾರ್, ಉದಯಕುಮಾರ ಜೇವರ್ಗಿ, ಲಕ್ಷ್ಮಿಕಾಂತ ಸ್ವಾದಿ, ನಾಗರಾಜ ಬಾಳಿ, ರವಿ ಹುಗಾರ, ಡಾ.ರಾಜಶೇಖರ ಬಂಡೆ, ಗೌತಮ ಒಂಟಿ, ಸುಮಾ ಪಾಟೀಲ, ಶಮಿನಾ ಬೇಗಂ, ಮಹಾದೇವಿ ಹೆಳವಾರ, ಸಂತೋಷ ಪಾಟೀಲ, ಸುನೀಲ್ ಸಿರ್ಖೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Web Stories