ಮತ್ತೆ ಜಾರುತ್ತಿದೆ ಜರ್ಮನ್ ಟೆಕ್ನಾಲಜಿ; ಮಳೆಗಾಲದಲ್ಲಿ ಮಂಗಳೂರು-ಮಡಿಕೇರಿ ರಸ್ತೆಗೆ ಇದೆಯ ಕಂಟಕ?

Public TV
3 Min Read
Madikeri German Technology 2

ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ 275ರ ಮಂಗಳೂರು-ಮಡಿಕೇರಿ ರಸ್ತೆಗೆ (Mangaluru-Madikeri National Highway) ಹೊಂದಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿಯ ತಡೆಗೋಡೆ ಮುಂಗಾರು ಮಳೆಗೆ ತನ್ನ ಅಡಿಪಾಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. 2021ರಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಬಳಿಕ ಮಳೆಗಾದಲ್ಲಿ ಬಿರುಕುಬಿಟ್ಟು ತೀವ್ರ ಟೀಕೆಗೆ ಗುರಿಯಾಗಿದ್ದ ಮಡಿಕೇರಿ ಜಿಲ್ಲಾಡಳಿತ ಭವನದ ತಡೆಗೋಡೆ ಈಗ ಮತ್ತೊಮ್ಮೆ ಸುದ್ದಿಯಾಗುವಂತೆ ಕಾಣಿಸುತ್ತಿದೆ.

ಬಿರುಕು ಬಿಟ್ಟಿರುವ ತಡೆಗೋಡೆಗೆ ಮೇ ತಿಂಗಳಿನಲ್ಲಿ ಸುರಿದ ತಾತ್ಕಾಲಿಕ ಗಾಳಿ ಮಳೆಗೆ ಮೇಲೆ ಹೊದಿಸಿದ್ದ ಟಾರ್ಪಲ್‌ಗಳೆಲ್ಲವೂ ಹಾರಿಹೋಗಿದೆ. ಎರಡೇ ಮಳೆಗೆ ತಡೆಗೋಡೆ ಸ್ಥಿತಿ ಹೀಗಾದರೆ ಮುಂದಿರುವ ಭಾರೀ ಮಳೆಗೆ (Rain) ತಡೆಗೋಡೆ ಗತಿಯೇನು ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದೆ.

Madikeri German Technology 5

ಕೊಡಗಿನ ಮಳೆಗಾಲ ಎಂದರೆ ಜಿಲ್ಲೆಯ ಜನರಿಗೆ ಒಂದು ರೀತಿಯ ಆತಂಕ ಕಾಡುತ್ತದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಭಾರೀ ಮಳೆಯಾದರೆ ಇಲ್ಲಿನ ಜನರಿಗೆ ಪ್ರವಾಹ ಭೂಕುಸಿತಗಳು ಆಗಿ ಜನಜೀವನವೇ ಅಸ್ತವ್ಯಸ್ತ ಆಗುತ್ತದೆ. ಅಲ್ಲದೇ 2019 ರಲ್ಲಿ ಮಹಾ ಮಳೆಗೆ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಇರುವ ಬೃಹತ್ ಗುಡ್ಡ ಕುಸಿದು ನಂತರದ ದಿನಗಳಲ್ಲಿ ಜರ್ಮನ್ ಟೆಕ್ನಾಲಜಿ (German Technology) ಬಳಸಿಕೊಂಡು ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ಅದೂ ಕೂಡ ಕಳೆದ ಮಳೆಗಾಲದ ಸಮಯದಲ್ಲಿ ತಡೆಗೋಡೆಯ ಸ್ಲ್ಯಾಬ್‌ಗಳು ಮಣ್ಣಿನ ಒತ್ತಡಕ್ಕೆ ಉಬ್ಬಿ ಬಂದಿದವು. ಇದರಿಂದ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಮಡಿಕೇರಿ ರಸ್ತೆ ಸಂಪರ್ಕವನ್ನು ಸ್ಥಗಿತ ಮಾಡಲಾಗಿತ್ತು.

Madikeri German Technology 3

ಈ ಬಾರಿ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಡೆಗೋಡೆಗೆ ಬೃಹತ್ ಟಾರ್ಪಲ್‌ಗಳನ್ನು ಹಾಕಲಾಗಿತ್ತು. ಆದರೆ ಮೇ ತಿಂಗಳ ಮಳೆಗೆ ಟಾರ್ಪಲ್‌ಗಳೆಲ್ಲವೂ ಗಾಳಿಮಳೆಗೆ ಹಾರಿಹೋಗಿದೆ. ಈಗಾಗಲೇ ಪುನರ್ ಕಾಮಗಾರಿ ನಡೆಸಲು ಹೈದರಾಬಾದ್ ಮೂಲದ ಅಯ್ಯಪ್ಪ ಕನ್ಟ್ರಕ್ಷನ್ಸ್ ಸಂಸ್ಥೆ ಹೊಣೆಹೊತ್ತಿದ್ದು ಇದೀಗ ತಡೆಗೋಡೆಗೆ ಅಳವಡಿಸಲಾಗಿದ್ದ ರೆಡಿಮೇಡ್ ಬ್ಲಾಕ್‌ಗಳನ್ನು ಮತ್ತೆ ಕಳಚಿ ಜೋಡಿಸುವ ಕೆಲಸ ಭರದಿಂದ ಸಾಗಿದೆ. ಸಾರ್ವಜನಿಕರಲ್ಲಿ ಜಿಲ್ಲಾಡಳಿತ ಭವನ ಈ ಬಾರಿ ಮಳೆಗಾಲದಿಂದ ಕುಸಿಯಬಹುದು ಎಂದು ಹಲವು ಅನುಮಾನಗಳು ಮೂಡಿದೆ. ಇದನ್ನೂ ಓದಿ: ಜನರಿಗೆ ಕರೆಂಟ್ ಶಾಕ್- ತಪ್ಪೊಪ್ಪಿಕೊಂಡ ಬೆಸ್ಕಾಂ

Madikeri German Technology 4

2022ರಲ್ಲಿ ಮಳೆಗೆ ತಡೆಗೋಡೆ ಕಳಪೆ ಕಾಮಗಾರಿ ಬಗ್ಗೆ ಈಗಿನ ಶಾಸಕರಾದ ಡಾ. ಮಂತರ್ ಗೌಡ ಹಾಗೂ ಎಎಸ್ ಪೊನ್ನಣ್ಣ ಧ್ವನಿ ಎತ್ತಿದ್ದರು. ಬಿಜೆಪಿ ಶಾಸಕರ ವೈಫಲ್ಯತೆಗಳಲ್ಲಿ ತಡೆಗೋಡೆ ದೊಡ್ಡ ಹಗರಣವೆಂದು ಜಿಲ್ಲಾ ಕಾಂಗ್ರೆಸ್ ಕೂಡ ವಾಗ್ದಾಳಿ ನಡೆಸಿತ್ತು. ಸಿದ್ದರಾಮಯ್ಯ ಕೂಡ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದು, ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಶಾಸಕರು ಈ ಬಾರಿ ಆಯ್ಕೆಯಾಗಿದ್ದಾರೆ.

ತಡೆಗೋಡೆಗೆ ಸಂಬಂಧಿಸಿದಂತೆ ನಿಲುವೇನು ಎಂಬುವುದರ ಬಗ್ಗೆ ಮಡಿಕೇರಿ ಶಾಸಕ ಮಂಥರ್ ಗೌಡ ಅವರನ್ನು ಕೇಳಿದರೆ, ಜಿಲ್ಲಾಡಳಿತ ಭವನದ ತಡೆಗೋಡೆಯ ಬಗ್ಗೆ ತನಿಖೆ ಹಂತದಲ್ಲಿ ಇರುವಾಗಲೇ ಮತ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಆರಂಭದಿಂದಲೂ ಈ ತಡೆಗೋಡೆ ಬಗ್ಗೆ ನಮ್ಮ ಪಕ್ಷದ ನಾಯಕರು ಆಕ್ಷೇಪ ಮಾಡುತ್ತಿದ್ದರು. ಆದರೆ ಈ ಹಿಂದಿನ ವಿರುದ್ಧ ಪಕ್ಷದ ನಾಯಕರು ನಮ್ಮ ಮೇಲೆ ಅಪಪ್ರಚಾರ ನಡೆಸುತ್ತಿದ್ದರು. ಈ ಕಾಮಗಾರಿಗೆ ಡಿಸೈನ್ ಮಾಡಿರುವ ಬಗ್ಗೆ ಅಥವಾ ಮಣ್ಣಿನ ಪರೀಕ್ಷೆ ಆಗಿಲ್ಲ. ಎಂಜಿನಿಯರ್ ಅವರನ್ನು ಕೇಳಿದರೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ಈಗಲೂ ಭಯ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಮಡಿಕೇರಿಗೆ ಕನೆಕ್ಟ್ ಇರುವುದರಿಂದ ಮಳೆಗಾಲದಲ್ಲಿ ಬೃಹತ್ ವಾಹನಗಳು ಹೋಗುವುದು ತುಂಬಾ ಕಷ್ಟ. ಆದರೂ ಎಂಜಿನಿಯರ್ ಏನೂ ಆಗಲ್ಲ ಎಂದು ಹೇಳಿದ್ದಾರೆ. ಆದರೆ ನಮಗೆ ಯಾವ ನಂಬಿಕೆಯೂ ಇಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 81ರ ಇಳಿ ವಯಸ್ಸಿನಲ್ಲೂ ಇಂಗ್ಲಿಷ್ ಎಂಎ ಪರೀಕ್ಷೆ ಬರೆದು ಯುವಕರಿಗೆ ಸ್ಫೂರ್ತಿಯಾದ ವೃದ್ಧ

Share This Article