23 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

Public TV
1 Min Read
Gadag Soldier

ಗದಗ: 23 ವರ್ಷ ಸೇನೆಯಲ್ಲಿ (Indian Army) ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಗದಗದ (Gadag) ಕದಡಿಯ ಯೋಧನಿಗೆ (Soldier) ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ.

Gadag Soldier 1

ಗ್ರಾಮದ ಈಶ್ವರ ಕರಿಸಕ್ರನವರ್ ಎಂಬುವವರು ಕಳೆದ 23 ವರ್ಷಗಳ ದೀರ್ಘ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗುರುವಾರ ತಮ್ಮ ತವರಿಗೆ ಮರಳಿದ್ದಾರೆ. ಇವರು ಗದಗದ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಆರತಿ ಬೆಳಗಿ ಸ್ವಾಗತ ನೀಡಿದ್ದಾರೆ. ನಂತರ ಸನ್ಮಾನಿಸಿ ರೈಲ್ವೇ ನಿಲ್ದಾಣದಿಂದ ಮಹಾತ್ಮ ಗಾಂಧಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬಸವೇಶ್ವರ ಸರ್ಕಲ್, ಪುಟ್ಟರಾಜ ಕವಿ ಗವಾಯಿಗಳ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ದಾರೆ. ಸಂಘದಿಂದ ದಾರಿಯುದ್ದಕ್ಕೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಅತ್ಯುತ್ತಮವಾದ ಕಾನೂನು ಸುವ್ಯವಸ್ಥೆ ಕೇರಳದಲ್ಲಿದೆ – ಪಿಣರಾಯಿ ವಿಜಯನ್‌

ಯೋಧ ಈಶ್ವರ ಅವರು 1999ರಲ್ಲಿ ಬೆಂಗಳೂರಿನ ಎಎಸ್‍ಸಿ, ಎಮ್‍ಟಿ ಬೆಟಾಲಿಯನ್‍ನಲ್ಲಿ ನೇಮಕಗೊಂಡಿದ್ದರು. ಸೇನೆಯಲ್ಲಿ ಚಾಲಕರಾಗಿ, ಸೈನಿಕರಾಗಿ, ಆರ್ಮಿ ಸಪ್ಲಾಯ್ ಕೋರ್, ಹವಾಲ್ದಾರ್ ಆಗಿ ಕೆಲಸ ಮಾಡಿದ್ದರು. ಜಮ್ಮುವಿನ ರಜೋರಿ, ಪಂಜಾಬ್‍ನ ಜಲಂದರ್, ಉತ್ತರ ಪ್ರದೇಶದ ಡೆಹ್ರಾಡೂನ್, ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ್, ಭೂಪಾಲ್, ಛತ್ತೀಸ್‍ಗಡದಲ್ಲಿ ಸೇವೆ ಸಲ್ಲಿಸಿದ್ದಾರೆ.

ಇಂದಿನ ಮೆರವಣಿಗೆಯಲ್ಲಿ ಯೋಧ ಈಶ್ವರ ಅವರ ಜೊತೆ ತಾಯಿ ಶಾಂತವ್ವ, ಪತ್ನಿ ವಿಜಯಲಕ್ಷ್ಮಿ, ಅಖಿಲ ಕರ್ನಾಟಕ ಮಾಜಿ ಸೈನಿಕರು ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಉಪಾಧ್ಯಕ್ಷ ಎನ್‍ಆರ್ ದೇವಾಂಗಮಠ, ಪ್ರಕಾಶಪ್ಪ ಬಂಡಿಹಾಳ, ನಿಂಗಪ್ಪ ಚೋರಗಸ್ತಿ, ಮಲ್ಲಿಕಾರ್ಜುನ್, ರವಿ, ಮಾರುತಿ, ಶಿಲ್ಪಾ ಬಂಡಿಹಾಳ, ಸುನಂದಾ ವಾಡ್ಕರ್, ಇಂದಿರಾ ಹೆಬಸೂರ ಸೇರಿದಂತೆ ಅನೇಕ ಮಾಜಿ ಸೈನಿಕರ ಸಂಘದ ಕುಟುಂಬದ ಮಹಿಳೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹತೆ ಜನ ಸೇವೆಗೆ ಸಿಕ್ಕ ಅವಕಾಶ: ರಾಹುಲ್ ಗಾಂಧಿ

Share This Article