ಈ ಬಾರಿ ವಿಧಾನಸಭೆ (Assembly) ಚುನಾವಣೆಯಲ್ಲಿ (Election) ಕನ್ನಡ ಸಿನಿಮಾ (Sandalwood) ರಂಗದೊಂದಿಗೆ ಗುರುತಿಸಿಕೊಂಡಿರುವ ಹಲವು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಇದ್ದು, ನಾಳೆ ಅವರ ಭವಿಷ್ಯ ಏನಾಗಲಿದೆ ಎನ್ನುವ ಕುತೂಹಲ ಮೂಡಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ ಮಾಡಿರುವ ಅವರು ಗೆಲ್ಲುತ್ತಾರಾ? ಅಥವಾ ಸೋಲುತ್ತಾರಾ ಎನ್ನುವ ಲೆಕ್ಕಾಚಾರ ನೆಡೆದಿದೆ.
ನಟ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ, ನಿರ್ಮಾಪಕ ಹಾಗೂ ವಿತರಕ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ, ನಿರ್ಮಾಪಕರಾದ ಮುನಿರತ್ನ ಹಾಗೂ ಉಮಾಪತಿ, ನಟ ಹಾಗೂ ನಿರ್ಮಾಪಕ ಬಿ.ಸಿ.ಪಾಟೀಲ್, ನಟರಾದ ಕುಮಾರ್ ಬಂಗಾರಪ್ಪ, ನಿರ್ದೇಶಕ ಸ್ಮೈಲ್ ಶ್ರೀನು, ನಟ ಟೆನ್ನಿಸ್ ಕೃಷ್ಣ ಈ ಬಾರಿ ವಿಧಾನಸಭೆ ಚುನಾವಣೆ ಕಣದಲ್ಲಿದ್ದಾರೆ. ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ
ಸಿಎಂ ಕುಮಾರಸ್ವಾಮಿ, ನಿರ್ಮಾಪಕ ಮುನಿರತ್ನ, ನಟ ಬಿ.ಸಿ.ಪಾಟೀಲ್ ಮತ್ತು ಕುಮಾರ್ ಬಂಗಾರಪ್ಪ ಈಗಾಗಲೇ ಹಲವು ಬಾರಿ ಗೆದ್ದಿದ್ದಾರೆ. ಉಮಾಪತಿ, ಸ್ಮೈಲ್ ಶ್ರೀನು ಮತ್ತು ಟೆನ್ನಿಸ್ ಕೃಷ್ಣ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಈಗಾಗಲೇ ಲೋಕಸಭೆ ಚುನಾವಣೆಗೆ ನಿಂತು ಸೋತಿರುವ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ನಾಳೆ ಈ ಎಲ್ಲರ ಭವಿಷ್ಯವನ್ನು ಮತದಾರ ಯಾವ ರೀತಿಯಲ್ಲಿ ಬರೆದಿದ್ದಾನೆ ಕಾದು ನೋಡಬೇಕು.
ಸಿನಿಮಾ ರಂಗಕ್ಕೆ ಸಂಬಂಧಿಸಿದ ಒಟ್ಟು ಎಂಟು ಜನರು ಸ್ಪರ್ಧಾ ಕಣದಲ್ಲಿದ್ದು, ಕನಿಷ್ಠ ಐದು ಜನರಾದರೂ ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದ್ದು, ಐದು ಜನರೂ ಹಳೆಹುಲಿಗಳು ಎನ್ನುವುದು ಗಾಂಧಿನಗರದ ಮಾತು. ಯಾರು ಗೆಲ್ಲುತ್ತಾರೋ, ಯಾರು ಸೋಲುತ್ತಾರೆ ನಾಳೆ ಗೊತ್ತಾಗಲಿದೆ.