ಮಾಜಿ ಶಿಷ್ಯನ ವಿರುದ್ಧ ತೊಡೆ ತಟ್ಟಲಿದ್ದಾರೆ ಸಿದ್ದರಾಮಯ್ಯ – ಕೋಲಾರದಲ್ಲೇ ಸ್ಪರ್ಧೆ ಯಾಕೆ?

Public TV
3 Min Read
siddaramaiah kolara

ಬೆಂಗಳೂರು: ಸಿದ್ದರಾಮಯ್ಯ ಕ್ಷೇತ್ರ ಕುತೂಹಲ ವಿಚಾರದಲ್ಲಿ ಪಬ್ಲಿಕ್ ಟಿವಿಯ ವರದಿ ನಿಜವಾಗಿದೆ. ವರುಣಾದಿಂದ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುವುದಿಲ್ಲ. ಕೋಲಾರದಿಂದಲೇ ಅವರು ಕಣಕ್ಕೆ ಇಳಿಯಲಿದ್ದಾರೆ ಎಂದು ಪಬ್ಲಿಕ್ ಟಿವಿ ಹೇಳುತ್ತಲೇ ಬಂದಿತ್ತು. ಅದರಂತೆಯೇ ಇಂದು ಸಿದ್ದರಾಮಯ್ಯ ಕೋಲಾರದಲ್ಲೇ (Kolara) ನಿಲ್ಲುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಸ್ವತಃ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಪಿಚ್ ಟೆಸ್ಟ್ ಮಾಡಲು ಕೋಲಾರಕ್ಕೆ ಹೋಗಿದ್ದಾಗಲೇ ಅಲ್ಲಿ ಸಿಕ್ಕ ಸ್ವಾಗತ, ಸ್ಪಂದನೆ ನೋಡಿ, ಸಿದ್ದರಾಮಯ್ಯ ಬಹುತೇಕ ಕೋಲಾರದಿಂದಲೇ ಸ್ಪರ್ಧೆ ಮಾಡಲು ಮನಸ್ಸು ಮಾಡಿದ್ದರು. ಆದರೂ ಸಿದ್ದರಾಮಯ್ಯ ಇರಲಿ ನೋಡೋಣ ಅಂತ ಒಂದು ಸುತ್ತು ವರುಣಾ (Varuna) ರೌಂಡ್ಸ್ ಮಾಡಿದ್ದರು. ಎರಡೂ ಕ್ಷೇತ್ರಗಳನ್ನು ಅಳೆದುತೂಗಿದ ಸಿದ್ದರಾಮಯ್ಯ ಕೋಲಾರ ಬಣ ಜಗಳಕ್ಕೆ ತೇಪೆ ಹಚ್ಚಿ ಸೋಮವಾರ ಕೋಲಾರ ಪ್ರವಾಸವನ್ನು ನಿಗದಿ ಮಾಡಿದ್ದರು.

ಮಾಜಿ ಸಂಸದ ಕೆಹೆಚ್ ಮುನಿಯಪ್ಪ (KH Muniyappa) ಸಮೇತ ಕೋಲಾರ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಸಿದ್ದರಾಮಯ್ಯ, ವೇದಿಕೆಯಲ್ಲಿ ರಮೇಶ್ ಕುಮಾರ್ (Ramesh Kumar) ಬಣವನ್ನು ಜೊತೆಗಿಟ್ಟುಕೊಂಡು ಸಮಾವೇಶ ಮಾಡಿದರು. ಅಂತಿಮವಾಗಿ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದರು.

ಸಿದ್ದರಾಮಯ್ಯ ಒತ್ತಾಯಕ್ಕೆ ಕಟ್ಟುಬಿದ್ದು ಬೆಂಗಳೂರಿಂದ ಜೊತೆಯಲ್ಲೇ ಬಂದ ಕೆಹೆಚ್ ಮುನಿಯಪ್ಪ, ಹೈಕಮಾಂಡ್ ಮತ್ತು ಪಕ್ಷದ ನಿರ್ಧಾರದಂತೆ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತೇನೆ, ಬೆಂಬಲ ಕೊಡುತ್ತೇನೆ ಎಂದು ಘೋಷಿಸಿದರು. ರಮೇಶ್ ಕುಮಾರ್ ಮಾತ್ರ ವೇದಿಕೆಯಲ್ಲಿ ಮಾತನಾಡಲಿಲ್ಲ. ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯುತ್ತಿರುವುದು ಜಿಲ್ಲಾ ಕಾಂಗ್ರೆಸ್‍ಗೆ ಹೊಸ ಜೋಶ್ ಬಂದಿದೆ. ಸಿದ್ದರಾಮಯ್ಯ ತಮ್ಮ ಮಾಜಿ ಶಿಷ್ಯ ವರ್ತೂರ್ ಪ್ರಕಾಶ್ (Varthur Prakash) ವಿರುದ್ಧ ಚುನಾವಣೆಯಲ್ಲಿ ತೊಡೆ ತಟ್ಟಲಿದ್ದಾರೆ. ಇದನ್ನೂ ಓದಿ: ಚಡ್ಡಿ ಹಾಕೊಂಡು ಬರೋರೂ ನನ್ನ ನೇರವಾಗಿ ಮಾತಾಡಿಸ್ಬೋದು – ಸಿದ್ದರಾಮಯ್ಯ

ಭಾಷಣ ಮಾಡಿದ ಸಿದ್ದರಾಮಯ್ಯ, ನಾನು ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ. ಅಭ್ಯರ್ಥಿಯಾಗಲು ತೀರ್ಮಾನ ಮಾಡಿರುವೆ. ನಿಮ್ಮ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಿಕ್ಕೆ ಸಾಧ್ಯವಿಲ್ಲ. ಆದರೆ ಮುನಿಯಪ್ಪ ಹೇಳಿದಂತೆ ಪಕ್ಷದ ಶಿಸ್ತನ್ನು ಪಾಲನೆ ಮಾಡಬೇಕಿದೆ. ಹೈಕಮಾಂಡ್ ಹಾಗೂ ಸ್ಕ್ರೀನಿಂಗ್ ಕಮಿಟಿ ಟಿಕೆಟ್‌ ನಿರ್ಧಾರ ಮಾಡಲಿದೆ. ಪಕ್ಷದ ನಿರ್ಧಾರ ಮಾಡಿದರೆ ಹೈ ಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳಬೇಕಿದೆ. ನಾನು ಇಲ್ಲಿಂದ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. ಆದರೆ ಅದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕು ಎಂದು ಹೇಳಿದರು.

ಕೋಲಾರ ಆಯ್ಕೆಗೆ ಕಾರಣಗಳೇನು?
ಸಿದ್ದರಾಮಯ್ಯ ತಂಡದ ಆಂತರಿಕ ಸಮೀಕ್ಷೆ ಪ್ರಕಾರ ಇಲ್ಲಿ ಸ್ಪರ್ಧಿಸಿದರೆ ಗೆಲುವು ಸುಲಭ. ಕೋಲಾರದಲ್ಲಿ 28,000 ಕುರುಬ ಮತಗಳಿವೆ. 40,000ದಷ್ಟು ಒಕ್ಕಲಿಗರಿದ್ದಾರೆ. 51 ಸಾವಿರ ಮುಸ್ಲಿಮರು , 49 ಸಾವಿರ ಪರಿಶಿಷ್ಟ ಜಾತಿ , 11 ಸಾವಿರ ಪರಿಶಿಷ್ಟ ಪಂಗಡ , 5000 ಬ್ರಾಹ್ಮಣರು ಹಾಗೂ 39 ಸಾವಿರ ಇತರೆ ಜಾತಿಯ ಮತಗಳಿವೆ.

ದೂರದಲ್ಲಿದ್ದರೆ ಕ್ಷೇತ್ರಕ್ಕೆ ಹೋಗುವುದು ಬಹಳ ಕಷ್ಟ. ಆದರೆ ಕೋಲಾರ ಬೆಂಗಳೂರು ಸನಿಹದಲ್ಲಿದೆ. ವರುಣಾದಲ್ಲಿ ಸ್ಪರ್ಧಿಸಿದರೆ ಪುತ್ರನ ರಾಜಕೀಯ ಭವಿಷ್ಯಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇತ್ತು. ಈ ಎಲ್ಲಾ ಲೆಕ್ಕಾಚಾರಗಳನ್ನು ಪರಿಗಣಿಸಿ ಸಿದ್ದರಾಮಯ್ಯ ಕೋಲಾರವನ್ನೇ ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಸವಾಲುಗಳೇನು?
ಕೋಲಾರ ಕಾಂಗ್ರೆಸ್‍ನ ಬಣಜಗಳಕ್ಕೆ ಬ್ರೇಕ್ ಹಾಕಬೇಕಾಗುತ್ತದೆ. ಕೋಲಾರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. ಮುಸ್ಲಿಮ್ ಮತಗಳ ವಿಭಜನೆ ತಪ್ಪಿಸಬೇಕಿದೆ. ಜೆಡಿಎಸ್‍ನ ಇಬ್ರಾಹಿಂ ರಾಜಕೀಯ, ಎಸ್‍ಡಿಪಿಐ, ಎಂಐಎಂ ಸ್ಪರ್ಧಿಸುವುದರಿಂದ ಈ ಮತಗಳು ತಪ್ಪದಂತೆ ನೋಡಿಕೊಳ್ಳಬೇಕಿದೆ. ವರ್ತೂರ್ ಪ್ರಕಾಶ್ ಸ್ಪರ್ಧೆಯಿಂದ ಕುರುಬ ಮತ ವಿಭಜನೆಯಾಗುವ ಸಾಧ್ಯತೆಯಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತರೆ ಸಿದ್ದರಾಮಯ್ಯನವರಿಗೆ ಕೋಲಾರವನ್ನು ಗೆಲ್ಲಬಹುದು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *