ಬೆಳಗಾವಿ: ಮುರುಗೇಶ್ ನಿರಾಣಿ (Murugesh Nirani) ನನ್ನ ಮುಂದೆ ಬಚ್ಚಾ, ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಕಟ್ಟುವಾಗ ನಿರಾಣಿ ಎಲ್ಲಿದ್ದರು? ನಮ್ಮ ಮನೆಗೆ ಟಿಕೆಟ್ ಕೇಳಿಕೊಂಡು ಬರುತ್ತಿದ್ದರು. ಈಗ ಬಹಳ ಮಾತನಾಡುತ್ತಾರೆ. ಅವರು ಹಿಂದೂ ದೇವತೆಗಳ ಬಗ್ಗೆ ಒಂದು ಆಡಿಯೋ ಬಿಟ್ಟಿದ್ದರು. ಅವರು ನಮಗೀಗ ಹಿಂದೂ ಸ್ವಾಮೀಜಿ ಬಗ್ಗೆ ಮಾತಾಡಬೇಡಿ ಎನ್ನುತ್ತಾರೆ. ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ. ಮರ್ಯಾದೆ ಇರಲ್ಲ ಎಂದು ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಮುರುಗೇಶ್ ನಿರಾಣಿ ಮಂತ್ರಿ ಹೇಗಾದ ಏನೆಲ್ಲಾ ಪ್ರಲಾಪ ಮಾಡಿದ ಎಲ್ಲಾ ಗೊತ್ತಿದೆ. ಹೆಚ್ಚು ಮಾತಾಡಿದರೆ ಎಲ್ಲಾ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಏಕವಚನದಲ್ಲೇ ಕಿಡಿಕಾರಿದ ಅವರು, ನಾನು ಕೇಂದ್ರದ ಮಂತ್ರಿ ಆದಾಗ ಯಡಿಯೂರಪ್ಪ ಪಾತ್ರ ಏನು ಇಲ್ಲ. ಯಡಿಯೂರಪ್ಪ ಅವರಿಗೆ ಪುನರ್ ಜನ್ಮ ಆಗಿದ್ದು, ನಾನು ಮಂತ್ರಿ ಆದ ಮೇಲೆ ಎಂದು ಹೇಳಿದರು.
ಪಂಚಮಸಾಲಿ ಸಮೂದಾಯಕ್ಕೆ 2/ಎ ಮೀಸಲಾತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಲೂ ಸರ್ಕಾರದ ಮೇಲೆ ವಿಶ್ವಾಸ ಇದೆ. ನಾಳೆ ಮೀಸಲಾತಿ ಪ್ರಕಟ ಆಗುತ್ತದೆ, ಯಾವುದೇ ಸಂಶಯ ಇಲ್ಲ ಎಂದ ಅವರು, ನಾಳೆ ಶಕ್ತಿಪ್ರದರ್ಶನ ಆಗುವುದಿದೆ, ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಲಾಲ್ ಬಿಲ್ ವಿಚಾರವಾಗಿ ಮಾತನಾಡಿದ ಅವರು, ಹಲಾಲ್ ಭಾರತದಲ್ಲಿ ಬ್ಯಾನ್ ಆಗಬೇಕು. ಅದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಬೊಮ್ಮಾಯಿ ಅವರು ಒಂದು ಹೆಜ್ಜೆ ಹಿಂದಿಟ್ಟು ಮುಂದೆ ಜಿಗಿತಾರೆ. ಅವರು ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ ಎಂದರೆ ನಿರ್ಣಯ ಆದಂಗೆ ಎಂದರು. ಇದನ್ನೂ ಓದಿ: ಗಡಿ ವಿವಾದ- ಅಮಿತ್ ಶಾ ಸೂಚನೆಗೂ ಕ್ಯಾರೇ ಎನ್ನದ ಮಹಾರಾಷ್ಟ್ರದ NCP ಶಾಸಕರು
ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ, ಹೆಚ್ಚು ವಿಶ್ವವಿದ್ಯಾಲಯ ಏನಕ್ಕೆ ಮಾಡುತ್ತಾರೆ ಎನ್ನುವುದೇ ಅರ್ಥ ಆಗುತ್ತಿಲ್ಲ. ವೈಸ್ ಚಾನ್ಸಿಲರ್ ಮಾಡಿ ಹಣ ತೆಗೆದುಕೊಳ್ಳುವುದು ಬಿಲ್ಡಿಂಗ್ ಕಟ್ಟೋದು, ಕಂಪ್ಯೂಟರ್ ತೆಗೆದುಕೊಳ್ಳುವುದು ಮಾಡುತ್ತಾರೆ ಎಂದು ಹೇಳಿದರು.
ಇದರ ಹಣ ಎಲ್ಲರಿಗೂ ಹೋಗುತ್ತಿದೆ. ಕುಲಪತಿ ಹುದ್ದೆ ಹಾಗೇ ಆಗಿದೆ. ಇದ್ದ ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಮಾಡುವುದು ಬಿಟ್ಟು ಈ ರೀತಿ ಮಾಡುತ್ತಿದ್ದಾರೆ. ಇರುವ ವಿಶ್ವವಿದ್ಯಾಲಯಗಳನ್ನ ಹೆಚ್ಚು ಅಭಿವೃದ್ಧಿಗೊಳಿಸಿ, ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಡ, ಕ್ವಾಲಿಟಿ ಎಜುಕೇಶನ್ ಕೊಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಎಂಜಿನಿಯರ್ ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ – ಲಾಠಿ ಬೀಸಿ ನಿಯಂತ್ರಿಸಿದ ಪೊಲೀಸರು