ನವದೆಹಲಿ: ನಗರದ 5 ಅಂತಸ್ತಿನ ಕಟ್ಟಡ ಕುಸಿತ ಏಳು ಜನ (Building collapse) ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಪ್ರಕರಣ ಈಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಉನ್ನತ ತನಿಖೆಗೆ ಕೋರ್ಟ್ (Delhi High Court) ಆದೇಶಿಸಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ದೆಹಲಿ ಸರ್ಕಾರ ಮತ್ತು ನಾಗರಿಕ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ದುರಂತದ ಬೆನ್ನಲ್ಲೇ ದೆಹಲಿಯಲ್ಲಿ ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಲು ಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು, ಅಪಘಾತದ ಜವಾಬ್ದಾರಿ ಕುಸಿದುಬಿದ್ದ ಕಟ್ಟಡದ ಪಿಜಿ ಮಾಲೀಕರದ್ದಷ್ಟೇ ಅಲ್ಲ; ಕಟ್ಟಡ ನಿರ್ಮಾಣ ಸುರಕ್ಷತೆಯನ್ನು ಪರಿಶೀಲಿಸಲು ಇರುವ ಎಲ್ಲ ಅಧಿಕಾರಿಗಳದ್ದೂ ಆಗಿದೆ. ಅಧಿಕಾರಿಗಳು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಶ್ರದ್ಧೆ ವಹಿಸಿದ್ದರೆ, ಅಂತಹ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.
ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ದೇಶದ ಅನೇಕ ಕಡೆಗಳಿಂದ ದೆಹಲಿಗೆ ಬರುತ್ತಾರೆ. ಅವರೇ ದೇಶದ ಭವಿಷ್ಯ. ಹೀಗಿರುವಾಗ ಅವರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಸಾವು ನೋವುಗಳಿಗೆ ನಾವು ಜವಾಬ್ದಾರರಲ್ಲ – ದೆಹಲಿಯಲ್ಲಿ ಕುಸಿದ ಪಿಜಿಯ ಬಾಡಿಗೆ ಅಗ್ರಿಮೆಂಟ್ನಲ್ಲಿ ಉಲ್ಲೇಖ!
ಇನ್ನು ಮುಂದುವರಿದ ರಕ್ಷಣಾ ಕಾರ್ಯಾಚರಣೆಯ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರಬೇಕು. ದುರಂತ ನಡೆದ ಪಿಜಿ ಹಾಸ್ಟೆಲ್ಗಳಲ್ಲಿ ಎಷ್ಟು ವಿದ್ಯಾರ್ಥಿಗಳು ವಾಸಿಸುತ್ತಿದ್ದರು ಎಂಬುದನ್ನು ನಾಗರಿಕ ಸಂಸ್ಥೆ ಬಹಿರಂಗಪಡಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಕುಸಿದ ಕಟ್ಟಡವನ್ನು ಮಾನ್ಯ ಅನುಮತಿಗಳೊಂದಿಗೆ ನಿರ್ಮಿಸಲಾಗಿದೆಯೇ ಎಂದು ತನಿಖೆ ನಡೆಸುವಂತೆ ಹೈಕೋರ್ಟ್ ದೆಹಲಿ ಮಹಾನಗರ ಪಾಲಿಕೆ(MCD)ಗೆ ನಿರ್ದೇಶನ ನೀಡಿದೆ.
ದೆಹಲಿಯ ವಿಶ್ವವಿದ್ಯಾಲಯ ಸೇರಿದಂತೆ ಯಾವುದೇ ಖಾಸಗಿ ಪಿಜಿ, ಹಾಸ್ಟೆಲ್ಗಳಿಗೆ ಕಟ್ಟುನಿಟ್ಟಿನ ನಿಯಮಗಳ ಅಗತ್ಯವನ್ನು ಒತ್ತಿ ಹೇಳಿದ ನ್ಯಾಯಾಲಯ, ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಐವರು ಸಾವು
