ಭೋಪಾಲ್: ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಜಾರಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಾಹೆದೊಲ್ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ನಡೆದಿದೆ.
ಸುಹಾಸಿನಿ ಬೈಗಾ ಮೃತಪಟ್ಟ ಬಾಲಕಿ. ಘಟನೆ ನಡೆದು 5 ದಿನಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬಾಲಕಿಯು ಜಬಲ್ಪುರ್ ಖಾಸಗಿ ಆಸ್ಪತೆಯಲ್ಲಿ ಮೃತಪಟ್ಟಿದ್ದಾಳೆ.
ನಡೆದದ್ದು ಏನು?
ನಾನು ಪಕ್ಕದ ಕೊಠಡಿಯಲ್ಲಿ ಇದ್ದ ಅಕ್ಕಿಯನ್ನು ತರಲು ಹೋಗಿದ್ದೆ. ಆಗ ಯಾರೋ ಕಿರುಚಿದ ಶಬ್ಧ ಕೇಳಿಸಿತು. ತಕ್ಷಣವೇ ಬಂದು ನೋಡಿದಾಗ ಬಾಲಕಿ ಸಾರ್ ಪಾತ್ರೆಯ ಒಳಗಡೆ ಬಿದ್ದಿದ್ದಳು. ತಕ್ಷಣವೇ ಆಕೆಯನ್ನು ಹೊರ ತೆಗೆದು, ಬಾಲಕಿಯ ತಂದೆಗೆ ಮಾಹಿತಿ ನೀಡಿದೆ. ಅವರು ಶಾಹೆದೊಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರು ಎಂದು ಅಂಗನವಾಡಿ ಸಹಾಯಕಿ ಬೈಗಾ ತಿಳಿಸಿದ್ದಾರೆ.
ಬಾಲಕಿಯ ಚಿಕಿತ್ಸೆಗೆ ಅಡುಗೆ ಸಹಾಯಕಿ 250 ರೂ. ನೀಡಿದ್ದರು. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ್ದರೂ, ಪ್ರಕರಣದ ಕುರಿತು ಶಾಹೆದೊಲ್ ಜಿಲ್ಲಾಸ್ಪತ್ರೆ ವೈದ್ಯರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಮಂಗಳವಾರ ಬಾಲಕಿ ಸ್ಥಿತಿ ಗಂಭೀರವಾಗಿದ್ದರಿಂದ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಇತ್ತ ಬಾಲಕಿ ಪೋಷಕರು ಆಕೆಯನ್ನು ಜಿಲ್ಲಾಸ್ಪತ್ರೆಯಿಂದ ಜಬಲ್ಪುರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತ ತನಿಖೆ ನಡೆಸುವಂತೆ ಮತ್ತು ನಿಷ್ಕಾಳಜಿ ತೋರಿದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv