ರಾಯಚೂರು: ಜಲ್ಲೆಯ ಲಿಂಗಸುಗೂರಿನಲ್ಲಿ ವಿಷಾನಿಲ ಸೇವನೆಯಿಂದ ನಾಲ್ಕು ಜನ ಸಾವನ್ನಪ್ಪಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಪಟ್ಟಣದ ಚೇತನ ಸೌಂಡ್ ಸರ್ವಿಸ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಜನರೇಟರ್ ನಿಂದ ಹೊರಬರುವ ಕಾರ್ಬನ್ ಮೊನಾಕ್ಸೈಡ್ ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆದಪ್ಪ, ಮೌಲಾಲಿ, ಮಂಜುನಾಥ್, ಶಶಿಕುಮಾರ್ ಮೃತ ದುರ್ದೈವಿಗಳು. ಘಟನೆಯಿಂದಾಗಿ ಸುರೇಶ್ ಎಂಬವನ ಸ್ಥಿತಿ ಗಂಭೀರವಾಗಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರೆಲ್ಲರು 18 ರಿಂದ 20 ವರ್ಷದ ಯುವಕರಾಗಿದ್ದು ಕರಡಕಲ್ ಗ್ರಾಮದಿಂದ ನಿತ್ಯ ಕೆಲಸಕ್ಕೆ ಬರುತ್ತಿದ್ದರು. ಗುರುವಾರ ರಾತ್ರಿ ಆನೆಹೊಸರು ಗ್ರಾಮದ ಶಾಲೆಯೊಂದರ ಕಾರ್ಯಕ್ರಮ ಮುಗಿಸಿ ಬರುವಾಗ ತಡರಾತ್ರಿಯಾಗಿದ್ದರಿಂದ ಕಚೇರಿಯಲ್ಲಿ ಮಲಗಿದ್ದರು. ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಡೀಸೆಲ್ ಜನರೇಟರ್ ಬಳಸಿದ್ದರು. ಹೀಗಾಗಿ ಜನರೇಟರ್ನಿಂದ ಬಿಡುಗಡೆಯಾದ ಅನಿಲದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಘಟನೆ ಹಿನ್ನೆಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2014ರ ಅಕ್ಟೋಬರ್ 14 ರಂದು ಸಹ ಇದೇ ರೀತಿ ಘಟನೆ ರಾಯಚೂರಿನ ಕರ್ನಾಟಕ ಬ್ಯಾಂಕ್ನಲ್ಲಿ ನಡೆದಿತ್ತು. ಜನರೇಟರ್ ವಿಷಾನಿಲದಿಂದ ಮ್ಯಾನೇಜರ್ ಸುಂದರಂ ಹಾಗೂ ಸಿಬ್ಬಂದಿ ಶರತ್ ಸಾವನ್ನಪ್ಪಿದ್ದರು.