ಚಿಕ್ಕಮಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ನಾಲ್ಕು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಸಂಜೆ 4.30ರ ಸಮಯಕ್ಕೆ ಮೇವಿಗೆಂದು ಬಂದ ಹಸುಗಳು ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿವೆ. ಈ 4 ಹಸುಗಳು ಕೂಡ ಗಂಗಮನಕ್ಕಿಯ ಸೀತಮ್ಮ ಎಂಬವರಿಗೆ ಸೇರಿದ್ದಾಗಿದ್ದು, ಹಾಲು ಕೊಡುತ್ತಿದ್ದವು.
ಸೀತಮ್ಮ ಕುಟುಂಬ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಏಕಾಏಕಿ ನಿಂತ ಜಾಗದಲ್ಲೇ ನಾಲ್ಕು ಜಾನುವಾರುಗಳು ಸಾವನ್ನಪ್ಪಿರೋದ್ರಿಂದ, ಸೀತಮ್ಮ ಕುಟುಂಬ ಭವಿಷ್ಯದ ಚಿಂತೆಯಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಹಸುಗಳು ಮೇವಿಗೆ ಹೋದ ಪ್ರದೇಶ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುವ ಜಾಗವಾಗಿದೆ. ಹೀಗಾಗಿ ಸ್ಥಳೀಯರು ಈ ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಯವೇ ಕಾರಣ ಎಂದು ಮೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.