ಬೆಂಗಳೂರು: ತರಬೇತಿ ನೌಕರರು ಮೆಟ್ರೋ ಚಾಲನೆ ನೀಡಿದ್ದ ಪರಿಣಾಮ ರೈಲು 30 ನಿಮಿಷ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡಿದರು.
ಭಾನುವಾರ ಮಧ್ಯಾಹ್ನ ಉತ್ತರ ದಕ್ಷಿಣ ಮಾರ್ಗದಲ್ಲಿ ಹೊರಟಿದ್ದ ರೈಲು ರಾಜಾಜಿನಗರ ಮೆಟ್ರೋ ಸ್ಟೇಶನ್ನಲ್ಲಿ ದಿಢೀರ್ ನಿಂತಿತ್ತು. ಹೀಗಾಗಿ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ನುರಿತ ಚಾಲಕನಿಂದ ಸಂಚಾರ ಪ್ರಾರಂಭಿಸಲಾಯಿತು.
ನಡೆದದ್ದು ಏನು?
ರೈಲ್ವೆ ಬೋರ್ಡ್ ಅನುಮತಿ ನೀಡದಿದ್ದರೂ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಟ್ (ಬಿಎಂಆರ್ಸಿಎಲ್) ಅಧಿಕಾರಿಗಳು ಇಂದು ತರಬೇತಿ ನೌಕರರಿಗೆ ಮೆಟ್ರೋ ರೈಲು ಚಾಲನೆಗೆ ಕೊಟ್ಟಿದ್ದರು. ತರಬೇತಿ ನೌಕರ ಕಮಲೇಶ್ ರಾಯ್ ಸೇರಿದಂತೆ ಹಲವರು ರೈಲು ಸಂಚಾರ ನಡೆಸಿದ್ದರು. ರಾಜಾಜಿನಗರ ಮೆಟ್ರೋ ಸ್ಟೇಶನ್ನಲ್ಲಿ ರೈಲು ಬಂದು ನಿಲ್ಲುತ್ತಿದ್ದಂತೆ, ಕಮಲೇಶ್ ರಾಯ್ಗೆ ಆಪರೇಟ್ ಮಾಡಲು ತಿಳಿಯದೆ ದಿಢೀರ್ ಸ್ಥಗಿತವಾಗಿತ್ತು.
30 ನಿಮಿಷ ರೈಲು ನಿಂತಿದ್ದರಿಂದ ಪ್ರಯಾಣಿಕರು ಸ್ಟೇಶನ್ನಲ್ಲಿ ಕಾಯುತ್ತ ನಿಲ್ಲುವಂತಾಯಿತು. ಬೇಜವಾಬ್ದಾರಿ ತೋರಿದ ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಭಾರೀ ಆಕ್ರೋಶ ಹೊರಹಾಕಿದರು. ಬಳಿಕ ನುರಿತ ಚಾಲಕನನ್ನು ಕರೆಸಿಕೊಂಡ ಅಧಿಕಾರಿಗಳು, ರೈಲು ಸಂಚಾರವನ್ನು ಯಥಾಸ್ಥಿತಿಗೆ ತಂದರು. ಇತ್ತ ಅಧಿಕಾರಿಗಳು ತರಬೇತಿ ನೌಕರರಿಗೆ ಮೆಟ್ರೋ ರೈಲು ಚಾಲನೆಗೆ ನೀಡಿದ್ದರಿಂದ ಬಿಎಂಆರ್ಸಿಎಲ್ ನೌಕರರ ಸಂಘವು ಕಿಡಿಕಾರಿದೆ.