ಮಂಡ್ಯ: ಜಿಲ್ಲೆಯ ಪಾಂಡವಪುರ ಕನಗನಮರಡಿ ಗ್ರಾಮದಲ್ಲಿ ಬಸ್ ನಾಲೆಗೆ ಉರುಳಿ 30 ಜನ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಮತ್ತೊಂದು ಅವಘಡ ಸಂಭವಿಸಿದ್ದು, ನಾಲೆಗೆ ಸ್ಕೂಟರ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಬಳಿ ನಡೆದಿದೆ.
ಲೋಕಸರ ಗ್ರಾಮದ ನಿವಾಸಿಗಳಾದ ನಾಗಮ್ಮ (50), ಅಂಬಿಕಾ (30), ಮಾನ್ಯತಾ (6) ಮೃತ ದುರ್ದೈವಿಗಳಾಗಿದ್ದು, ದೇವಸ್ಥಾನಕ್ಕೆ ತೆರಳಿ ಸ್ಕೂಟರ್ ನಲ್ಲಿ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನಾಗಮ್ಮ ಕುಟಂಬದ ಹಿರಿಯರಾಗಿದ್ದು, ಅವರ ಮಗಳು ಅಂಬಿಕಾ, ಮೊಮ್ಮಗಳು ಮಾನ್ಯತಾ ಇಂದು ದೇವಾಲಯಕ್ಕೆ ತೆರಳಿದ್ದರು.
ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಮೃತ ನಾಗಮ್ಮ ಅವರ ಹೆಣ್ಣು ಮಕ್ಕಳು, ಮೊಮ್ಮಕ್ಕಳೆಲ್ಲ ಲೋಕಸರ ಗ್ರಾಮಕ್ಕೆ ಬಂದಿದ್ದರು. ಇಂದು ರಾತ್ರಿ ೮.೩೦ ರ ಸುಮಾರಿಗೆ ಲೋಕಸರ ಗ್ರಾಮದ ಸಮೀಪದ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲೆಂದು ಅಂಬಿಕಾ, ತನ್ನ ತಾಯಿ ನಾಗಮ್ಮ ಮತ್ತು ತಂಗಿಯ ಮಗಳು ಮಾನ್ಯತಾಳನ್ನು ಸ್ಕೂಟರ್ನಲ್ಲಿ ಕರೆದುಕೊಂಡು ಹೋಗಿದ್ದರು. ಪೂಜೆ ಮುಗಿಸಿ ವಾಪಾಸಾಗುವ ವೇಳೆ ತಿರುವಿನಲ್ಲಿ ಆಯತಪ್ಪಿ ಮೂವರು ತುಂಬಿ ಹರಿಯುತ್ತಿದ್ದ ವಿಸಿ ನಾಲೆಯೊಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಮೂವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಬಾಲಕಿ ಮಾನ್ಯತಾ ಸ್ಥಳದಲ್ಲೇ ಸಾವನ್ನಪ್ಪಿದಳು. ಬಳಿಕ ತಾಯಿ ನಾಗಮ್ಮ ಹಾಗೂ ಅಂಬಿಕಾರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಈ ಕುರಿತು ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದು ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರ ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv