ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇಕೋಟೆ ಎಂಬ ಗ್ರಾಮದಲ್ಲಿ 20 ದಿನಗಳ ಅವಧಿಯಲ್ಲಿ ಮೂರು ಕಬ್ಬೆಕ್ಕು (ಪುನುಗು ಬೆಕ್ಕು)ಗಳು ಸಾವನ್ನಪ್ಪಿರೋದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಹೀಗೆ, ಸರದಿ ಸಾಲಲ್ಲಿ ಕಬ್ಬೆಕ್ಕುಗಳು ಸಾಯುತ್ತಿರೋದು ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ.
ಮೂಡಿಗೆರೆಯ ಹಳೇಕೋಟೆಯ ಹರ್ಷ ಎಂಬುವರ ಕಾಫಿ ತೋಟದಲ್ಲಿ 20 ದಿನಗಳಲ್ಲಿ ಮೂರು ಕಬ್ಬೆಕ್ಕುಗಳು ಸಾವನ್ನಪ್ಪಿವೆ. 20 ದಿನಗಳ ಹಿಂದೆ ಒಂದು ಕಬ್ಬೆಕ್ಕು, ವಾರದ ಹಿಂದೆ ಮತ್ತೊಂದು, ಇಂದು ಮಗದೊಂದು ಕಬ್ಬೆಕ್ಕು ಸತ್ತಿರೋದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹೀಗೆ ಕಬ್ಬೆಕ್ಕುಗಳು ಸಾವನ್ನಪ್ಪುತಿರೋದನ್ನು ಕಂಡ ಕಾಫಿ ತೋಟದ ಮಾಲೀಕ ಹರ್ಷ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನಿಡಿದ್ದಾರೆ.
ಸಾಯೋ ಮೊದಲು ಮಂಕಾಗೋ ಕಬ್ಬೆಕ್ಕುಗಳು, ನಡೆಯಲು, ಒಡಲಾಗದೆ ನರಳಾಡಿ-ನರಳಾಡಿ ಸಾಯುತ್ತಿರೋದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಕಬ್ಬೆಕ್ಕುಗಳು ಮನುಷ್ಯನ ಕಣ್ಣಿಗೆ ಬೀಳೋದೇ ಕಡಿಮೆ. ಬಿದ್ದರೂ ಜೀವ ಭಯದಿಂದ ಓಡುತ್ತವೆ. ಆದರೆ, ಕಾಫಿತೋಟದಲ್ಲಿ ಕಬ್ಬೆಕ್ಕುಗಳು ಹೀಗೆ ನಿಶ್ಯಕ್ತಿಯಿಂದ ಸರದಿ ಸಾಲಲ್ಲಿ ಸಾಯುತ್ತಿರೋದು ಸ್ಥಳೀಯರ ನಿದ್ದೆಗೆಡಿಸಿದೆ. ಹರ್ಷ ಅವರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಕಬ್ಬೆಕ್ಕಿನ ಮೃತದೇಹವನ್ನ ಪರೀಕ್ಷೆಗೆಂದು ತೆಗೆದುಕೊಂಡು ಹೋಗಿದ್ದಾರೆ. ಕೊರೊನಾದ ಕರಿನೆರಳ ನಡುವೆ ಕಬ್ಬೆಕ್ಕುಗಳ ಸರಣಿ ಸಾವು ಕಾಫಿನಾಡಿಗರನ್ನು ಆತಂಕಕ್ಕೀಡುಮಾಡಿದೆ.