ನವದೆಹಲಿ: ದೇವರು ಶಿವ ಬಲಿ ಕೇಳಿದ್ದಾನೆಂದು ಗಾಂಜಾ ಸೇವಿಸಿ ಇಬ್ಬರು ಹುಡುಗರು ಆರು ವರ್ಷದ ಬಾಲಕನನ್ನು ಚಾಕುವಿನಿಂದ ಕತ್ತು ಸೀಳಿ ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಪರಿಶೀಲನೆ ನಡೆಸಿದರು. ನಂತರ ಕೊಲೆಗೆ ಹುಡುಗರು ಬಳಸಿದ್ದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ದುರ್ಗಾ ಪೂಜೆ ವೇಳೆ ಪೆಂಡಾಲ್ಗೆ ಬೆಂಕಿ – ಮಕ್ಕಳು ಸೇರಿದಂತೆ ಐವರು ಸಾವು, 66 ಮಂದಿಗೆ ಗಾಯ
ಕೊಲೆಯಾದ ಬಾಲಕನ ಪೋಷಕರಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬ ಎರಡು ವರ್ಷದ ಮಗು. ಮತ್ತೊಬ್ಬ ಕೊಲೆಯಾದ ಹುಡುಗನಿಗಿಂತ ಹಿರಿಯವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಪತಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ, ರಾತ್ರಿ ಊಟದ ನಂತರ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಭಜನೆ ಹಾಡುತ್ತಿದ್ದಾಗ ತಮ್ಮ ಮಗ ನಾಪತ್ತೆಯಾಗಿರುವುದು ಗೊತ್ತಾಗಿದೆ. ಸಮೀಪದ ಕೊಳೆಗೇರಿಗಳಲ್ಲಿ ಹುಡುಕಾಟ ನಡೆಸಿದಾಗ, ನೆಲದ ಮೇಲೆ ರಕ್ತ ಕಂಡಿರುವುದಾಗಿ ಬಾಲಕನ ತಂದೆ ಹೇಳಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ಮುಲಾಯಂ ಸಿಂಗ್ – ಅಖಿಲೇಶ್ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ
ಇಬ್ಬರು ಆರೋಪಿಗಳು ಭಗವಾನ್ ಶಿವನ ಪ್ರಸಾದವನ್ನು ಸೇವಿಸಿದ ನಂತರ, ಶಿವನು ಮಗುವಿನ ಬಲಿ ಕೇಳಿದ್ದಾನೆಂದು ಭಾವಿಸಿ ಕೊಲೆ ಮಾಡಿದ್ದಾರೆ. ಆರು ವರ್ಷದ ಬಾಲಕನನ್ನು ಕೊಲ್ಲುವ ಮೊದಲು ಇಬ್ಬರು ಆರೋಪಿಗಳು ಗಾಂಜಾ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.