– ಮೂರು ತಲೆಮಾರಿನ ವ್ಯಾಜ್ಯವೊಂದು ಇತ್ಯರ್ಥ
ಧಾರವಾಡ: ಧಾರವಾಡ ಜಿಲ್ಲಾ ನ್ಯಾಯಾಲಯದ ಲೋಕ ಅದಾಲತ್ನಲ್ಲಿ ಒಂದೇ ದಿನಕ್ಕೆ 1793 ಪ್ರಕರಣದ ರಾಜಿ ಸಂಧಾನ ಮಾಡಿಸುವ ಮೂಲಕ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಲಾಗಿದೆ.
ಹಲವು ವರ್ಷಗಳಿಂದ ಜಿಲ್ಲೆಯ ಇತರ ನ್ಯಾಯಾಲಯಗಳಲ್ಲಿ ನಡೆದಿದ್ದ ಕೌಟುಂಬಿಕ, ಜಾಮೀನು ವ್ಯಾಜ್ಯ ಸೇರಿದಂತೆ ಹಲವು ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಪಡಿಸಲಾಗಿದೆ. ಒಟ್ಟು 38 ನ್ಯಾಯಾಧೀಶರು ಆಯಾ ನ್ಯಾಯಾಲಯದ ಆವರಣದಲ್ಲಿ 1793 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.
ವಾಹನಗಳ ವ್ಯಾಜ್ಯ, ಬಾಕಿ ಕೊಡಬೇಕಾದ ಎಲ್ಲ ಪ್ರಕರಣಗಳನ್ನು ಸಹ ವಿಚಾರಣೆ ಮಾಡಿದ ನ್ಯಾಯಾಧೀಶರು, ರಾಜಿ ಮಾಡಿಸುವ ಮೂಲಕ 10 ಕೋಟಿ 33 ಲಕ್ಷದ ಚೆಕ್ಗಳನ್ನು ವಿತರಣೆ ಮಾಡಿದ್ದಾರೆ. ಈ ವ್ಯಾಜ್ಯಗಳು ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಇದ್ದವು. ಇಂದು ಕಕ್ಷಿದಾರರನ್ನು ಕರೆಸಿ ರಾಜಿ ಮಾಡಿಸಲಾಯಿತು.
ಇದೇ ಲೋಕ ಅದಾಲತ್ನಲ್ಲಿ ಕಳೆದ ಮೂರು ತಲೇಮಾರಿನಿಂದ ಆಸ್ತಿಗಾಗಿ ಉಳಿದಿದ್ದ ವ್ಯಾಜ್ಯವೊಂದನ್ನು ಇತ್ಯರ್ಥಪಡಿಸಲಾಯಿತು. ಜಿಲ್ಲೆಯ ಮನಗುಂಡಿ ಗ್ರಾಮದ ಶಾಂತವ್ವ ಅಂಗಡಿ ಅವರ ಜಮೀನಿನ ವಾಟ್ನಿ ಪ್ರಕರಣ ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿದ್ದು ವಿಶೇಷವಾಗಿತ್ತು. ಪ್ರಕರಣದ ಕಕ್ಷಿದಾರರಾದ ಅಜ್ಜಿ, ಅಣ್ಣ-ತಮ್ಮಂದಿರು, ಮಕ್ಕಳು ಮತ್ತು ಮೊಮ್ಮಕ್ಕಳು ಇಂದಿನ ರಾಷ್ಟ್ರೀಯ ಲೋಕ್ ಅದಾಲತ್ದಲ್ಲಿ ಹಾಜರಾಗಿ ರಾಜಿ ಮಾಡಿಕೊಂಡರು.