ಕಠ್ಮಂಡು: ಕಂದಕಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ ಶಿಕ್ಷಕರು ಸೇರಿದಂತೆ 16 ವಿದ್ಯಾರ್ಥಿಗಳು ಮೃತಪಟ್ಟಿದ್ದು, 11 ಜನರಿಗೆ ಗಾಯವಾಗಿರುವ ಘಟನೆ ನೇಪಾಳದ ದಾಂಗ್ ಜಿಲ್ಲೆಯ ತುಲ್ಸಿಪುರದ ರಾಮ್ರಿಯಲ್ಲಿ ನಡೆದಿದೆ.
ಬಸ್ ಕಪೂರ್ಕೋಟ್ ನಿಂದ ತುಲ್ಸಿಪುರ್ ಕಡೆಗೆ ಹೋಗುತ್ತಿತ್ತು. ಈ ವೇಳೆ ತುಲ್ಸಿಪುರ-ಕಪೂರ್ಕೋಟ್ ರಸ್ತೆಯಿಂದ ಸುಮಾರು 400 ಮೀಟರ್ ಗಳಷ್ಟು ಆಳದ ಕಂದಕಕ್ಕೆ ಬಸ್ ಉರುಳಿದೆ. ಪರಿಣಾಮ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ 16 ಮಂದಿ ಮೃತಪಟ್ಟಿದ್ದಾರೆ ಜಿಲ್ಲಾ ಪೊಲೀಸ್ ಅಧೀಕ್ಷಕ ತುಳಸಿಪುರ ಪ್ರೇಮ್ ಬಹದ್ದೂರ್ ಶಾಹಿ ತಿಳಿಸಿದ್ದಾರೆ.
ಈ ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಗಾಯಾಳುಗಳನ್ನು ರಕ್ಷಿಸಿದ್ದು, ಅವರನ್ನು ರಾಪ್ತಿ ಝೋನಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನೇಪಾಳಗುಂಜ್ದವರು ಎಂದು ಗುರುತಿಸಲಾಗಿದೆ.
ಘೋರಾಹಿಯಲ್ಲಿನ ಕೃಷ್ಣಾಸೆನ್ ಟೆಕ್ನಿಕಲ್ ಸ್ಕೂಲ್ ನಿಂದ 31 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರವಾಸಕ್ಕೆ ತೆರಳಿದ್ದರು. ಒಂದು ದಿನದ ಪ್ರವಾಸಕ್ಕಾಗಿ ಅವರೆಲ್ಲರೂ ಬಂದಿದ್ದು, ಸಲ್ಯಾನ್ ಕಪೂರ್ಕೋಟ್ ನ ಮುಲ್ಪಾಣಿಯ ಬೋಟಾನಿಕಲ್ ಗಾರ್ಡನ್ ಪ್ರವಾಸದಿಂದ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv