ಬೆಂಗಳೂರು: 108 ಅಂಬುಲೆನ್ಸ್ (Ambulance) ಆರೋಗ್ಯ ಸೇವೆಗೆ 262 ನೂತನ ಅಂಬುಲೆನ್ಸ್ ಸೇರ್ಪಡೆಗೊಂಡಿವೆ. ವಿಧಾನ ಸೌಧದ (Vidhan Soudha) ಮುಂಭಾಗದಲ್ಲಿ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನೂತನ ಅಂಬುಲೆನ್ಸ್ಗಳಿಗೆ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ, 262 ನೂತನ ಅಂಬುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪಾಲ್ಗೊಂಡು ನೂತನ ಅಂಬುಲೆನ್ಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, 108 ಆರೋಗ್ಯ ಕವಚ ಅಂಬುಲೆನ್ಸ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರುವ ಅಗತ್ಯವಿದೆ. ಪ್ರಸ್ತುತ 262 ನೂತನ ಅಂಬುಲೆನ್ಸ್ಗಳನ್ನು ಸೇರ್ಪಡೆಗೊಳಿಸುತ್ರಿರುವುದು ಅಂಬುಲೆನ್ಸ್ ಸೇವೆ ಬಲಪಡಿಸುವತ್ತ ನಮ್ಮ ಮೊದಲ ಹೆಜ್ಜೆ ಅಷ್ಟೇ ಎಂದರು. ಇದನ್ನೂ ಓದಿ: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣ ಒದಗಿಸ್ತೇವೆ: ಸಿದ್ದರಾಮಯ್ಯ
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 108 ಅಂಬುಲೆನ್ಸ್ ಸೇವೆಯನ್ನ ಸುವ್ಯವಸ್ಥಿತಗೊಳಿಸಲು ಎಲ್ಲ ರೀತಿಯ ಅವಕಾಶಗಳಿವೆ. ಅಂಬುಲೆನ್ಸ್ ಸ್ಥಳಕ್ಕೆ ತಲುಪುವ ವೇಳೆಗೆ ವೈದ್ಯರಿಗೆ ರೋಗಿಯ ಮಾಹಿತಿ ತಲುಪಬೇಕು. ಹೊಸ ಹೊಸ ತಂತ್ರಜ್ಞಾನ ಉಪಯೋಗ ಮಾಡಿಕೊಂಡು ರೋಗಿಯ ಪರಿಸ್ಥಿತಿ ಆದಷ್ಟು ಬೇಗ ಆಸ್ಪತ್ರೆಗೆ ಮುಟ್ಟಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅಂಬುಲೆನ್ಸ್ ಆರೋಗ್ಯ ಸೇವೆ ಬಲಪಡಿಸುವತ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಕವಚ ಸೇವೆ ಗುಣಮಟ್ಟದ ವೃದ್ಧಿಯಲ್ಲಿ ಕುಂಠಿತವಾಗಿರುವುದು ನಿಜ. ಈ ಸೇವೆಯಲ್ಲಿ ಸಾಕಷ್ಟು ಕುಂದುಕೊರತೆಗಳಿವೆ. ಲೋಪದೋಷಗಳನ್ನು ಸರಿಪಡಿಸಲು ಆರೋಗ್ಯ ಇಲಾಖೆ ಕಠಿಬದ್ಧವಾಗಿದೆ. 262 ಹೊಸ ಅಂಬುಲೆನ್ಸ್ ಆರೋಗ್ಯ ಕವಚ ಸೇವೆಗೆ ಒದಗಿಸಿ ನಾವು ಸುಮ್ಮನಾಗಲ್ಲ. ಇವುಗಳ ನಿರ್ವಹಣೆಯತ್ತ ಹೆಚ್ವು ಗಮನ ಹರಿಸಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಇದನ್ನೂ ಓದಿ: 108 ಅಂಬುಲೆನ್ಸ್ನವ್ರು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ತಾರೆ: ಡಿಕೆಶಿ ಅಸಮಾಧಾನ
ಈ ನಿಟ್ಟಿನಲ್ಲಿ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಅಲ್ಲದೇ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನ ಬೇರೆ ರಾಜ್ಯಗಳಲ್ಲಿರುವ ಉತ್ತಮ ಮಾದರಿಗಳ ಅದ್ಯಾಯನಕ್ಕೆ ಕಳಿಸಲಾಗಿದೆ. ಹಿರಿಯ ಅಧಿಕಾರಿಗಳ ತಂಡ ಹಾಗೂ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿ ಆಧರಿಸಿ 108 ಅಂಬುಲೆನ್ಸ್ ಆರೋಗ್ಯ ಸೇವೆಯಲ್ಲಿ ಸುಧಾರಣೆಗಳನ್ನ ಜಾರಿಗೆ ತರುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.