ಬೆಂಗಳೂರು: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣಕಾಸು ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಘೋಷಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ (Vidhanasoudha) ಗ್ರ್ಯಾಂಡ್ ಸ್ಟೆಪ್ಸ್ ಬಳಿ ನೂತನ 262 ಅಂಬುಲೆನ್ಸ್ಗಳ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಯಾರೂ ಚಿಕಿತ್ಸೆ ಸಿಗದೇ ಸಾಯಬಾರದು. ಅಪಘಾತ ವೇಳೆ, ಹೆರಿಗೆ ವೇಳೆ ಚಿಕಿತ್ಸೆ, ಹೃದಯಾಘಾತ ಹೀಗೆ ಆದಾಗ ಚಿಕಿತ್ಸೆ ಸಿಗದೇ ಸಾಯಬಾರದು. ಅದಕ್ಕಾಗಿಯೇ 2008 ರಲ್ಲಿ ತುರ್ತು ಆರೋಗ್ಯಸೇವೆ ತರಲಾಯ್ತು. 236 ತಾಲೂಕುಗಳಿದ್ದು, ತಲಾ ನಾಲ್ಕರಂತೆ ಕನಿಷ್ಟ 840 ಅಂಬುಲೆನ್ಸ್ ಇರಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದರೆ ಬಹಳ ಅನುಕೂಲ ಆಗುತ್ತೆ ಎಂದು ಹೇಳಿದರು.
ಹೆಚ್ಚುವರಿ ಅಂಬುಲೆನ್ಸ್ (Ambulance) ಖರೀದಿಗೆ ಹಣಕಾಸು ಒದಗಿಸ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕಿತ್ತು. ವಿವಿಧ ಸ್ಕ್ಯಾನ್ಗಳಿಗೆ ಬಡವರು ವೆಚ್ಚ ಭರಿಸಲು ಆಗಲ್ಲ. ಇಲ್ಲಿಯವರೆಗೆ 25 ಕೋಟಿ ಜನರಿಗೆ ಸಿಎಂ ನಿಧಿಯಡಿ ಪರಿಹಾರ ಕೊಡುವ ಕೆಲಸ ಆಗಿದೆ. ನಾನು ಸಿಎಂ ನಿಧಿಯಡಿ 1/4 ವೆಚ್ಚ ಭರಿಸ್ತೇನೆ. ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡುತ್ತಾರೆ ಅನ್ನೋ ಭಾವನೆ ಇದೆ. ಜಯದೇವ ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆ ಇದೆ ಅಂದ್ರೆ ಬೇರೆ ಕಡೆಯೂ ಕೊಡೋಕ್ಕಾಗುತ್ತೆ. ಈಗ ಸರ್ಕಾರಿ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿದ್ದೇನೆ. ಈಗ ಮೆಡಿಕಲ್ ಕಾಲೇಜುಗಳು ಜಾಸ್ತಿಯಾಗಿ ಡಾಕ್ಟರ್ ಗಳೂ ಜಾಸ್ತಿಯಾಗಿ ಬಿಟ್ಟಿದ್ದಾರೆ. ವೈದ್ಯರ ಹುದ್ದೆ ಭರ್ತಿಗೆ ಉತ್ತರ ಕರ್ನಾಟಕಕ್ಕೂ ಹೆಚ್ಚು ಗಮನ ಕೊಡಲು ಹೇಳಿದ್ದೇನೆ ಎಂದರು. ಇದನ್ನೂ ಓದಿ: 108 ಅಂಬುಲೆನ್ಸ್ನವ್ರು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ತಾರೆ: ಡಿಕೆಶಿ ಅಸಮಾಧಾನ
ಇದೇ ವೇಳೆ ಪ್ರಧಾನಿ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಅಕ್ಕಿ ಕೊಡೋದು ಮೋದಿ ಚೀಲ ಸಿದ್ದರಾಮಯ್ಯ ಕೊಡೋದು ಅಂತ ಬಿಜೆಪಿಯವರು ಟೀಕೆ ಮಾಡುತ್ತಾರೆ. ಆಹಾರ ಭದ್ರತೆ ಕಾಯ್ದೆ ತಂದಿದ್ದು ಯಾರಪ್ಪ? ಮನಮೋಹನ್ ಸಿಂಗ್ ಅಲ್ವಾ? ಕೊರೋನಾ ನಂತರ ಉಚಿತ ಅಕ್ಕಿ ಕೊಡ್ತಿರೋದು. ಅಕ್ಕಿ ಚೀಲಕ್ಕೂ ಮೂರು ರೂ. ಪಡೆದುಕೊಳ್ಳುತ್ತಾರೆ. ಗ್ಯಾರಂಟಿ ವಿರೋಧಿಸುವ ಗಿರಾಕಿ ಮೋದಿಯವರು ಈಗ ಅವರೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ಎಂದರು.
ಜನರಿಗೆ ಅನುಕೂಲ ಕೊಡೋದ್ರಲ್ಲಿ ದ್ವಂದ್ವ ಇರಬಾರದು. ಈ ನಿಟ್ಟಿನಲ್ಲಿ ನಾವು ಗ್ಯಾರಂಟಿ ಘೋಷಣೆ ಮಾಡಿ ಸುಮ್ನೆ ಕೂತಿಲ್ಲ, ಅದರ ಜಾರಿ ಮಾಡಿದ್ದೇವೆ. ಮಹಿಳೆಯರು ಫ್ರೀಯಾಗೊ ಬಸ್ ಗಳಲ್ಲಿ ಓಡಾಡುತ್ತಿದ್ದಾರೆ. 5 ಕೆ.ಜಿ ಅಕ್ಕಿ ಬದಲು ಹಣ ಕೊಡ್ತೀವಿ, ಪುಕ್ಕಟೆ ಕರೆಂಟ್ ಕೊಡುತ್ತಿದ್ದೇವೆ. ಹಿಂದಿನವರು ಇದೆಲ್ಲ ಕೊಡ್ತಿದ್ರಾ?, ಇದೇ ಮೋದಿ ಗ್ಯಾರಂಟಿಯಿಂದ ಆರ್ಥಿಕ ದಿವಾಳಿ ಆಗುತ್ತೆ ಅಂದ್ರು. ದಿವಾಳಿನೂ ಆಗಿಲ್ಲ ಗಿವಾಳಿನೂ ಆಗಿಲ್ಲ, ಅವರು ಎಲ್ಲ ಸುಳ್ಳು ಹೇಳ್ತಾರೆ. ನಾವು ಹೇಳಿದ್ವಿ, ಕೊಟ್ವಿ ಅಷ್ಟೇ ಅಂದ್ರು.