ಬೆಂಗಳೂರು: ಇನ್ನೂ ಒಂದು ವರ್ಷ ತುಂಬದ ಪುಟ್ಟ ಮಗುವೊಂದು ಕಣ್ಮರೆಯಾಗಿರುವ ಘಟನೆ ಬೆಂಗಳೂರಿನ ಹೆಗ್ಡೆನಗರ ಸಮೀಪದ ಎಕ್ಸ್ ಸರ್ವಿಸ್ ಮ್ಯಾನ್ ಲೇಔಟ್ ನಲ್ಲಿ ನಡೆದಿದೆ.
ರಾಯಚೂರು ಮೂಲದ ಕುಟುಂಬವೊಂದು ಬೆಂಗಳೂರಿನ ಹೆಗ್ಡೆನಗರ ಸಮೀಪದ ಎಕ್ಸ್ ಸರ್ವಿಸ್ಮನ್ ಲೇಔಟ್ ನಲ್ಲಿ ಕಳೆದ ಐದು ವರ್ಷದಿಂದ ಬಿಡಾರ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಆ ಕುಟುಂಬದ ಭೀಮಾ ಮತ್ತು ಮಹೇಶ್ವರಿ ದಂಪತಿಯ ಇನ್ನೂ ಒಂದು ವರ್ಷ ತುಂಬದ ಪುಟ್ಟ ಮಗು ಅಭಿರಾಮ್ ಕಣ್ಮರೆಯಾಗಿದ್ದಾನೆ. ಕುಟುಂಬ ಸದಸ್ಯರು ಮನೆಯೊಳಗೆ ಕೆಲಸ ಮಾಡುತ್ತಿದ್ದ ವೇಳೆ ಮಗು ಅಭಿರಾಮ್ ಹೊರಗೆ ಆಟವಾಡುತ್ತಿದ್ದನು.
ಈ ಸಂದರ್ಭದಲ್ಲಿ ಬೆಳಿಗ್ಗೆಯಿಂದಲೇ ಒಂದು ಆಟೋವನ್ನು ತಂದು ಯಾರೋ ಅಪರಿಚಿತರು ನಿಲ್ಲಿಸಿಕೊಂಡಿದ್ದರು. ಆ ಇಬ್ಬರು ಮಧ್ಯಾಹ್ನದ ಹೊತ್ತಿನಲ್ಲಿ ಬೈಕ್ ನಲ್ಲಿ ಬಂದು ಮಗುವನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಲಾಗ್ತಿದೆ.
ಸದ್ಯ ಮಗು ಕಾಣೆಯಾಗಿರುವ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.