ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಾರಾಣಸಿ ಪ್ರವಾಸದಲ್ಲಿದ್ದಾರೆ. ಶಿಖರ್ ಧವನ್ ಮಾಡಿದ ತಪ್ಪಿಗೆ ನಾವಿಕ ಶಿಕ್ಷೆ ಅನುಭವಿಸುವಂತಾಗಿದೆ.
ಗಂಗಾ ನದಿಯಲ್ಲಿ ದೋಣಿ ವಿಹಾರದ ವೇಳೆ ಶಿಖರ್ ಧವನ್ ಸೈಬಿರಿಯನ್ ಹಕ್ಕಿಗಳಿಗೆ ಆಹಾರ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶಿಖರ್ ಧವನ್ ಶೇರ್ ಸಹ ಮಾಡಿಕೊಂಡಿದ್ದರು. ಹಕ್ಕಿ ಜ್ವರದ ನಿಯಂತ್ರಣಕ್ಕಾಗಿ ಸರ್ಕಾರ ಪಕ್ಷಿಗಳಿಗೆ ಆಹಾರ ನೀಡದ ಕುರಿತು ಕೆಲ ಮಾರ್ಗಸೂಚಿಗಳನ್ನ ತಂದಿದೆ. ಆದ್ರೆ ಶಿಖರ್ ಧವನ್ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆ ನಾವಿಕ ಸೋನು ಸಹಾನಿ ಮತ್ತು ಬೋಟ್ ಮಾಲೀಕ ಪ್ರದೀಪ್ ಸಾಹಾನಿ ದಂಡ ಪಾವತಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವು ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಿದೆ. ಹಾಗಾಗಿ ವಾರಾಣಸಿ ನದಿ ದಡದಲ್ಲಿರುವ ಪಕ್ಷಿಗಳಿಗೆ ಆಹಾರ ನೀಡದಂತೆ ಸ್ಥಳೀಯ ಆಡಳಿತ ಮಂಡಳಿ ಕೆಲ ನಿಯಮಗಳನ್ನ ರೂಪಿಸಿತ್ತು.
ವಾರಾಣಸಿಗೆ ಆಗಮಿಸಿದ್ದ ಧವನ್, ಕಾಲಭೈರವ ಮಂದಿರಕ್ಕೆ ತೆರಳಿ ದರ್ಶನ ಪಡೆದು, ಸಂಜೆ ಗಂಗಾ ಆರತಿಯಲ್ಲಿಯೂ ಭಾಗಿಯಾಗಿದ್ದರು. ಗಂಗಾ ನದಿಯಲ್ಲಿ ಬೋಟಿಂಗ್ ವೇಳೆ ಹಕ್ಕಿಗಳಿಗೆ ಕಾಳು ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಫೋಟೋ ವೈರಲ್ ಬಳಿಕ ವಾರಾಣಸಿ ಕಲೆಕ್ಟರ್ ನಾವಿಕರಿಗೆ ದಂಡ ವಿಧಿಸುವಂತೆ ಆದೇಶಿಸಿದ್ದರು