ಉಡುಪಿ: ಜಿಲ್ಲೆಯ ಬೆಳಪು ನಿವಾಸಿ, ಸಾಹಿತಿ ಮುಮ್ತಾಜ್ ಬೇಗಂ ಇಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿದ ಪರಿಣಾಮ ಮುಮ್ತಾಜ್ ಬೇಗಂ ಅವರನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತು.
ಮುಮ್ತಾಜ್ ಅವರು ಚಿಂಪಿ, ವರ್ತುಲ, ಪರದೇಶಿ, ಸರ್ವ ಋತುಗಳೂ ನಿನಗಾಗಿ, ಅಂಕುರ, ಬಂದಳಿಕೆ ಸೇರಿದಂತೆ ಹಲವು ಕಥೆ, ಕವನ, ಕಾದಂಬರಿಗಳನ್ನು ಬರೆದಿದ್ದಾರೆ. ತಮ್ಮ ವಿಶಿಷ್ಠ ಬರವಣಿಗೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ, ಹಿರಿಯ ನಾಗರಿಕರ ಸಾಹಿತ್ಯ ಪ್ರಶಸ್ತಿ, ಬಸವ ಸಾಹಿತ್ಯ ಕಲಾವೇದಿಕೆಯ ಬಸವಜ್ಯೋತಿ ಪ್ರಶಸ್ತಿ, ಮೇವುಂಡಿ ಮಲ್ಲಾರಿ ಮಕ್ಕಳ ಕಥಾ ಪುರಸ್ಕಾರ, ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ.
ಮುಮ್ತಾಜ್ ಅವರಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದಾನೆ. ಮುಮ್ತಾಜ್ ಅವರಿಗೆ 72 ವರ್ಷ ವಯಸ್ಸಾಗಿತ್ತು.