ಮಡಿಕೇರಿ: ಆರನೆ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಕೊಡಗಿನಲ್ಲೂ ಮುಷ್ಕರ ಮುಂದುವರಿದಿದೆ. ಇದರ ನಡುವೆ ತರಬೇತಿ ಪಡೆಯುತ್ತಿರುವ ಚಾಲಕರನ್ನು ಉಪಯೋಗಿಸಿಕೊಂಡು ಮಡಿಕೇರಿ ಘಟಕದ ಮೂರು ಬಸ್ಗಳನ್ನು ಭಾನುವಾರ ಚಾಲನೆ ಮಾಡಿದ್ದು, ಸಂಚಾರಿ ನಿಯಂತ್ರಣಾಧಿಕಾರಿಗಳೇ ಬಸ್ಗಳಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಮಡಿಕೇರಿಯಿಂದ ಕುಶಾಲನಗರ ಮತ್ತು ಪುತ್ತೂರು ಮಾರ್ಗಗಳಲ್ಲಿ ಮೂರು ಬಸ್ಸುಗಳು ಕೇವಲ ಒಂದು ಟ್ರಿಪ್ ಮಾತ್ರವೇ ಸಂಚರಿಸಿದ್ದು, ಈ ವೇಳೆ ನಿಯಂತ್ರಣಾಧಿಕಾರಿಗಳೇ ನಿರ್ವಾಹಕರ ಕೆಲಸ ಮಾಡಿದ್ದಾರೆ. ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಆಗಮಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು, ಸಫಲವಾಗಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ ಟ್ರೈನಿ ಚಾಲಕರಿಂದ ಬಸ್ಗಳನ್ನು ಓಡಿಸಲಾಗಿದ್ದು, ನಿಯಂತ್ರಣಾಧಿಕಾರಿಗಳೇ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮೂರು ಬಸ್ಗಳು ಮಡಿಕೇರಿ ನಿಲ್ದಾಣದಿಂದ ಸಂಚರಿಸಿದ್ದರೆ, ಮೈಸೂರು ಮತ್ತು ಬೆಂಗಳೂರಿನಿಂದ ವಿರಾಜಪೇಟೆಗೆ ಹತ್ತು ಬಸ್ಗಳು ಸಂಚರಿಸಿವೆ. ಆದರೆ ಎಲ್ಲ ಬಸ್ಗಳಿಗೂ ಪ್ರಯಾಣಿಕರ ಕೊರತೆ ಕಾಡಿದೆ.