ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವಕಪ್ ಗೆದ್ದು ತಂದಿತ್ತು. ಯಾವುದೇ ಅನುಭವವಿಲ್ಲದ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿದಿದ್ದ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿ ವಿಜಯ ಪಾತಕೆ ಹಾರಿಸಿದ್ದರು. ಅಂದು ತಂಡ ದಿಗ್ಗಜ ಆಟಗಾರರಾದ ಸಚಿನ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿರಂತಹ ಅನುಭವಿ ಆಟಗಾರರಿಲ್ಲದೇ ಮೊದಲ ಟಿ20 ವಿಶ್ವಕಪ್ ಗೆಲುವು ಪಡೆದಿತ್ತು. 2007ರ ಏಕದಿನ ಕ್ರಿಕೆಟ್ ಸೋಲಿನ ಬಳಿಕ ನಡೆದಿದ್ದ ಮೊದಲ ಐಸಿಸಿ ಟೂರ್ನಿಗೆ ಬಿಸಿಸಿಐ ಯುವ ತಂಡವನ್ನೇ ಆಯ್ಕೆ ಮಾಡಿತ್ತು.
ಟಿ20 ಆರಂಭದ ಮೆಗಾ ಟೂರ್ನಿಯಲ್ಲಿ ಆಡದಂತೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅವರನ್ನು ಒಪ್ಪಿಸಿದ್ದು ರಾಹುಲ್ ದ್ರಾವಿಡ್ ಎಂದು ಅದು ತಂಡದ ಕೋಚ್, ಮ್ಯಾನೇಜರ್ ಆಗಿದ್ದ ಲಾಲ್ಚಂದ್ ರಾಜಪೂತ್ ತಿಳಿಸಿದ್ದಾರೆ. ಖಾಸಗಿ ವಾಹಿನಿಯೊಂದು ನಡೆಸಿದ ಫೇಸ್ಬುಕ್ ಲೈವ್ನಲ್ಲಿ ಈ ಕುರಿತು ಲಾಲ್ಚಂದ್ ರಾಜಪೂರ್ ಮಾತನಾಡಿದ್ದಾರೆ. ಅಂದು ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಭಾಗಿಯಾಗಿತ್ತು. ಪರಿಣಾಮ ಕೆಲ ಆಟಗಾರರು ನೇರವಾಗಿ ಇಂಗ್ಲೆಂಡ್ಗೆ ಆಗಮಿಸಿದ್ದರು. ಅಲ್ಲಿಂದಲೇ ವಿಶ್ವಕಪ್ ಟೂರ್ನಿಗಾಗಿ ಜೋಹನ್ಸ್ಬರ್ಗ್ ಗೆ ತೆರಳುವ ಯೋಜನೆ ಮಾಡಿದ್ದರು. ಆದರೆ ಆ ವಿಶ್ವಕಪ್ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ನಿರ್ಧರಿಸಲಾಗಿತ್ತು. ದ್ರಾವಿಡ್ ಅವರು ಸಚಿನ್ ಹಾಗೂ ಗಂಗೂಲಿ ಅವರನ್ನು ಇದಕ್ಕೆ ಒಪ್ಪಿಸಿದ್ದರು ಎಂದು ಲಾಲ್ಚಂದ್ ಅಂದಿನ ಘಟನೆಯನ್ನು ವಿವರಿಸಿದರು.
ಯುವ ಆಟಗಾರರ ತಂಡ ವಿಶ್ವಕಪ್ ಗೆದ್ದ ಬಳಿಕ ತಾವು ಏಕೆ ಆಡಲಿಲ್ಲ ಎಂದು ಹಿರಿಯ ಆಟಗಾರರು ಬೇಸರ ವ್ಯಕ್ತಪಡಿಸಿದ್ದರು. ಅದರಲ್ಲೂ ಸಚಿನ್ ಅವರು ಬಹಳ ವರ್ಷ ಕ್ರಿಕೆಟ್ ಆಡಿದ್ದರೂ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಮಾತನ್ನು ಹೇಳಿದ್ದರು. 2011ರ ವಿಶ್ವಕಪ್ ಟೂರ್ನಿಯನ್ನು ಗೆದ್ದರೂ ಸಚಿನ್ ಟೂರ್ನಿಗಾಗಿ ಸಾಕಷ್ಟು ಶ್ರಮವಹಿಸಿದ್ದರು. ಆದರೆ ಯುವ ತಂಡ ಮಾತ್ರ ಮೊದಲ ಪ್ರಯತ್ನದಲ್ಲೇ ವಿಶ್ವಕಪ್ ಗೆದ್ದು ಬೀಗಿತ್ತು ಎಂದು ಲಾಲ್ಚಂದ್ ತಮ್ಮ ನೆನಪುಗಳನ್ನು ಹಂಚಿಕೊಂಡರು.
2007ರ ವಿಶ್ವಕಪ್ ಟೂರ್ನಿ ನನಗೂ, ಧೋನಿ ಅವರಿಗೆ ಲಭಿಸಿದ ಅದ್ಭುತ ಅವಕಾಶ. ಏಕೆಂದರೆ ಕೋಚ್ ಹಾಗೂ ಕ್ಯಾಪ್ಟನ್ ಆಗಿ ಇಬ್ಬರಿಗೂ ಅದು ಮೊದಲ ಅನುಭವಾಗಿತ್ತು. ಪರಿಣಾಮ ತಂಡದ ಡ್ರೆಸ್ಸಿಂಗ್ ರೂಂ ನಲ್ಲೂ ಉತ್ತಮ ವಾತಾವರಣವಿತ್ತು. ಒತ್ತಡಕ್ಕೆ ಒಳಗಾಗದೆ ನಮ್ಮ ಸಾಮರ್ಥ್ಯದ ಮೇಲೆ ಮಾತ್ರ ಗಮನಹರಿಸಿದ್ದೇವು. ಆಟಗಾರರಿಗೆ ಸ್ಫೂರ್ತಿ ನೀಡುವ ಮಾತನಾಡುವ ವೇಳೆ ಅವರು ಒತ್ತಡಕ್ಕೆ ಒಳಗಾಗಲಿಲ್ಲ. ಆ ಗೆಲುವು ಭಾರತ ಕ್ರಿಕೆಟ್ ಬಗ್ಗೆ ಎಲ್ಲರ ದೃಷ್ಟಿಯನ್ನು ಬದಲಿಸಿತ್ತು. ಮೊದಲ ವಿಶ್ವಕಪ್ ಆಡುತ್ತಿದ್ದೇವೆ ಎಂಬ ಆಟಗಾರರ ಭಾವನೆಯೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣದಿಂದಲೇ ಗೆಲುವು ಲಭಿಸಿತ್ತು ಎಂದು ತಿಳಿಸಿದ್ದಾರೆ.