ಮಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಆದರೆ ಇದೀಗ ಸೋಮವಾರದಿಂದ ರಾಜ್ಯಾದ್ಯಂತ ದೇವಸ್ಥಾನದ ಬಾಗಿಲು ಓಪನ್ ಆಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಸಂಪೂರ್ಣ ತಯಾರಿ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಈಗ 800 ರಿಂದ ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಭಕ್ತರ ಆಧಾರ್ ಕಾರ್ಡ್ ಮಾಹಿತಿಯನ್ನು ದಾಖಲಿಸಿದ್ದೇವೆ. ಭಕ್ತರ ಟೆಂಪರೇಚರ್ ನೋಡಿ ಸ್ಯಾನಿಟೈಸರ್ ಹಾಕಿ ದರ್ಶನಕ್ಕೆ ಅವಕಾಶ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ ಸಿಬ್ಬಂದಿ ಫೇಸ್ ಶೀಲ್ಡ್, ಗ್ಲೌಸ್ ಹಾಕಿದ್ದಾರೆ. ಸೋಮವಾರದಿಂದ ಎಲ್ಲರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಎಲ್ಲಾ ಹರಕೆ ಸೇವೆಗಳೂ ನಿರಂತರವಾಗಿ ನಡೆಯುತ್ತದೆ. ಅನ್ನಪೂರ್ಣ ಅನ್ನಛತ್ರದಲ್ಲಿ ನಿತ್ಯ ಅನ್ನದಾನ ಇರುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕೂತು ಊಟ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.