ಶಿವಮೊಗ್ಗ: ಹಳ್ಳಿಗಳಲ್ಲಿ ಈ ಹಿಂದೆ ಗೋಮಾಳಗಳಿರುತ್ತಿದ್ದವು. ಗೋವುಗಳು ಅಲ್ಲಿ ಮೇಯ್ದು ತನ್ನ ಹಸಿವು ನೀಗಿಸಿಕೊಳ್ಳುತ್ತಿದ್ದವು. ಆದರೀಗ ಗೋಮಾಳಗಳೆಲ್ಲಾ, ಜಮೀನುಗಳಾಗಿ ಪರಿವರ್ತನೆ ಹೊಂದಿವೆ. ಜೊತೆಗೆ ನಗರ ಪ್ರದೇಶಗಳು ನಗರೀಕರಣದಿಂದಾಗಿ ಸುತ್ತಮುತ್ತಲೂ ಕೂಡ ದನ, ಕರುಗಳಿಗೆ ಮೇವಿಲ್ಲದಂತೆ ಆಗಿದೆ. ಹೀಗಾಗಿ ಗೋ ಮಾತೆಗೆ ಮೇವು ಇಲ್ಲವಾಗಿದೆ. ಇದನ್ನರಿತ ಸ್ಥಳೀಯ ಸಂಘ ಸಂಸ್ಥೆಗಳು ವಿನೂತನ ಯೋಜನೆ ಜಾರಿಗೊಳಿಸಲು ಹೊರಟಿದ್ದಾರೆ.
ಹೌದು. ಶಿವಮೊಗ್ಗದಲ್ಲಿ ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ, ವಿಶ್ವ ಹಿಂದೂ ಪರಿಷತ್ತು, ಗೋ ರಕ್ಷಣಾ ವೇದಿಕೆಯ ಸದಸ್ಯರು ಈ ವಿನೂತನ ಕಾರ್ಯಯೋಜನೆ ಹಮ್ಮಿಕೊಂಡಿದ್ದು, ವಿಭಿನ್ನವಾದ ಆಂದೋಲನ ಆರಂಭಿಸಿದ್ದಾರೆ. ಅದುವೇ ‘ಗೋವಿಗಾಗಿ ಮೇವು’ ಎಂಬ ವಿನೂತನ ಕಾರ್ಯಕ್ರಮ. ಈ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದ್ದಾರೆ. ತಾವೇ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡಿ ಮತ್ತು ಮೇವಿನ ಬೀಜ ಎರಚುವುದರ ಮೂಲಕ, ಗೋವಿಗಾಗಿ ಮೇವು ಯೋಜನೆಗೆ ಚಾಲನೆ ನೀಡಿದರು.
ನಗರದ ಹಾಗೂ ಅಕ್ಕಪಕ್ಕದ ಊರುಗಳಲ್ಲಿ ಖಾಲಿ ಜಾಗ ಮತ್ತು ಜಮೀನುಗಳು ಇದ್ದರೆ ಇಂತಹ ಸ್ಥಳಗಳಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವು ಬೆಳೆಸಲು ಈ ಸಂಘ-ಸಂಸ್ಥೆಗಳ ಸದಸ್ಯರು ಮುಂದಾಗಿದೆ. ನಿವೇಶನ ಅಥವಾ ಖಾಲಿ ಜಾಗದಲ್ಲಿ ಕಸವನ್ನು ಸುರಿಯುವ ಬದಲಾಗಿ ಗೋವಿಗಾಗಿ ಮೇವು ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ಸೈಟ್ ಅಥವಾ ಜಮೀನು ಮಾಲೀಕರಿಗೆ ಯಾವುದೇ ಖರ್ಚು ಬರುವುದಿಲ್ಲ. ಅಲ್ಲದೇ 2-3 ತಿಂಗಳಿಗೊಮ್ಮೆ ಮೇವು ಕಟಾವಿಗೆ ಬರುತ್ತದೆ. ಈ ವೇಳೆ ಗೋ ಸಂರಕ್ಷಣಾ ವೇದಿಕೆ ಸ್ವಯಂ ಸೇವಕರು ಬಂದು ಈ ಮೇವನ್ನು ಕಟಾವು ಮಾಡಿ ವಿತರಿಸುವ ಕೆಲಸ ಮಾಡುವು ಯೋಜನೆ ಹೊಂದಲಾಗಿದೆ.
ಈಗಾಗಲೇ ಮಳೆಗಾಲ ಆರಂಭವಾಗುತ್ತಿದ್ದು, ಮೇವು ಬೆಳೆಯಲು ನೀರು ಹಾಕುವ ಅವಶ್ಯಕತೆ ಕೂಡ ಇರುವುದಿಲ್ಲ. ಕೇವಲ ಎರಡು ಮೂರು ತಿಂಗಳಲ್ಲಿ ಮೇವು ಕಟಾವಿಗೆ ಬರುತ್ತದೆ. ಅದನ್ನು ಈ ಯೋಜನೆಯ ಸ್ವಯಂ ಸೇವಕರು ಕಟಾವು ಮಾಡಿಕೊಂಡು ಸಂಬಂಧಿಸಿದ ಗೋ ಶಾಲೆಗಳಿಗೆ ಆಯಾ ಜಾಗದ ಮಾಲೀಕರ ಹೆಸರಿನಲ್ಲಿ ತಲುಪಿಸುತ್ತಾರೆ. ಇದರಿಂದ ಗೋ ಪೂಜೆ ಮಾಡಿದ ಪುಣ್ಯ ಸಿಗುತ್ತದೆ ಎಂಬುದು ಈ ವಿನೂತನ ಯೋಜನೆಗೆ ಪ್ಲಾನ್ ಮಾಡಿದ ಸದಸ್ಯರದ್ದಾಗಿದೆ.
ಅಲ್ಲದೇ ಶಿವಮೊಗ್ಗ ನಗರದಲ್ಲಿ ಸುಮಾರು 4 ಗೋ ಶಾಲೆಗಳಿದ್ದು ಇದರ ಜೊತೆಗೆ ಬೀಡಾಡಿ ದನಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಗೋವುಗಳಿಗೆ ಮೇವು ಈ ವಿನೂತನ ಯೋಜನೆ ಮೂಲಕ ಸಿಕ್ಕಂತಾಗುತ್ತದೆ. ಅದರಂತೆ ಈಗಾಗಲೇ ಪ್ರಾಯೋಗಿಕವಾಗಿ ಹತ್ತು ಎಕರೆ ವಿವಿಧ ಜಾಗಗಳಲ್ಲಿ ಮೇವು ಬೆಳೆಸುವ ಯೋಜನೆ ಹೊಂದಿದ್ದು, ಈಗಾಗಲೇ 5 ಏಕರೆ ಜಾಗ ಈ ಯೋಜನೆಗಾಗಿ ಲಭಿಸಿದೆ.
ಒಟ್ಟಾರೆ ಗೋವುಗಳು ನಮ್ಮ ಜೀವನಾಡಿಗಳಾಗಿದ್ದು ಅವುಗಳನ್ನು ಪೂಜ್ಯತೆಯಿಂದ ಕಾಣುತ್ತೇವೆ. ಈಗ ಗೋವುಗಳಿಗಾಗಿ ಮೇವಿನ ತೊಂದರೆಯಾಗಬಾರದು ಎಂದು ಇರುವ ಗೋ ಶಾಲೆಗಳ ಗೋವುಗಳಿಗಾಗಿ, ಮತ್ತು ಬೀಡಾಡಿ ಹಸುಗಳಿಗಾಗಿ ಮೇವಿನ ಆಂದೋಲನ ಆರಂಭಿಸಲಾಗಿದೆ. ಏನೇ ಆಗಲಿ ಪಶುಸಂಗೋಪನೆ ಇಲಾಖೆ ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದೊಂದಿಗೆ ಆರಂಭಿಸಲಾಗಿರುವ ರಾಜ್ಯದಲ್ಲಿಯೇ ವಿನೂತನ ಯೋಜನೆ ಇದಾಗಿದೆ. ಗೋವಿಗಾಗಿ ಮೇವು ಚಿಂತನೆಗೆ ಆಸಕ್ತ ನಾಗರೀಕರು ಉದಾರವಾಗಿ ತಮ್ಮ ಖಾಲಿ ಇರುವ ನಿವೇಶದಲ್ಲಿ ಜಾನುವಾರಗಳಿಗೆ ಮೇವು ಬೆಳೆಸಲು ಅನುವು ಮಾಡಿಕೊಡಬಹುದಾಗಿದೆ.