ಮಡಿಕೇರಿ: ತಲಕಾವೇರಿ ದೇವಾಲಯಕ್ಕೆ ದಾರಿಗೆ ಬೆಟ್ಟವನ್ನು ಅಗೆದದ್ದು, ಇಲ್ಲಿನ ಮಣ್ಣಿನಲ್ಲಿ ಒಸರುತ್ತಿರುವ ಜಲ ಹಾಗೂ ಜೇಡಿ ಮಣ್ಣಿನಂತಹ ಮಣ್ಣಿರುವುದೇ ಇಲ್ಲಿ ಗುಡ್ಡ ಕುಸಿತಕ್ಕೆ ಕಾರಣ ಎಂದು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಗುಡ್ಡ ಕುಸಿತದಿಂದ ತಲಕಾವೇರಿಯಲ್ಲಿ ದುರ್ಘಟನೆ ನಡೆದಿದ್ದು, ಇಲ್ಲಿನ ಸ್ಥಿತಿ-ಗತಿಗಳ ಬಗ್ಗೆ 2019ರಲ್ಲೇ ಕಣ್ಮರೆ ಆಗಿರುವವರಲ್ಲಿ ಒಬ್ಬರಾದ ಅರ್ಚಕ ನಾರಾಯಣ ಆಚಾರ್ ಮಾತನಾಡಿದ್ದರು. ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಆತಂಕಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಆಚಾರ್, ಇಲ್ಲಿನ ಮಣ್ಣಿನಲ್ಲಿ ಒಸರುತ್ತಿರುವ ಜಲ ಹಾಗೂ ಜೇಡಿ ಮಣ್ಣಿನಂತಹ ಮಣ್ಣು ಇರುವುದೇ ಇಲ್ಲಿ ಗುಡ್ಡ ಕುಸಿತಕ್ಕೆ ಕಾರಣ ಎಂದು ಹೇಳಿದ್ದರು.
ಜೊತೆಗೆ ಈ ಬಗ್ಗೆ ಜಿಲ್ಲಾಡಳಿತ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪವಿತ್ರ ಧಾರ್ಮಿಕ ಕ್ಷೇತ್ರದ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದರು. ಕೊಡಗಿನಲ್ಲಿ ಕಳೆದ ಐದು ದಿನದಿಂದ ತುಂಬ ಮಳೆ ಆಗುತ್ತಿದ್ದು, ಗುಡ್ಡಗಳ ಕುಸಿಯುತ್ತಿವೆ. ಗುಡ್ಡ ಕುಸಿತದಿಂದ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಮನೆ ಸಂಪೂರ್ಣ ಮುಚ್ಚಿಹೋಗಿದ್ದು, ಆರ್ಚಕರು ಸೇರಿ ಐವರು ಮಂದಿ ಕಣ್ಮರೆಯಾಗಿದ್ದಾರೆ.