ಚಿಕ್ಕಬಳ್ಳಾಪುರ: ವೀಕೆಂಡ್ ಇದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿಬೆಟ್ಟಕ್ಕೆ ಇಂದು ಪ್ರವಾಸಿಗರ ದಂಡೇ ಹರಿದು ಬಂದಿದೆ.
ಇಂದು ಭಾನುವಾರ ರಜೆ ದಿನ ಇರುವ ಕಾರಣ ಮತ್ತು ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆ ಪ್ರವಾಸಿಗರು ಜಗದ್ವಿಖ್ಯಾತ ನಂದಿಗಿರಿಧಾಮಕ್ಕೆ ಬೆಳ್ಳಂ ಬೆಳಿಗ್ಗೆ ಆಗಮಿಸಿದ್ದಾರೆ. ಆದರೆ ಹಾಗೇ ಬಂದ ಪ್ರವಾಸಿಗರಿಗೆ ನಿರಾಸೆಯಾಗಿದ್ದು, ಪೊಲೀಸರು ಅವರನ್ನು ಅಡ್ಡಗಟ್ಟಿ ವಾಪಸ್ ಕಳುಹಿಸಿದ್ದಾರೆ.
ಜೂನ್ 31ರವರೆಗೆ ಕೊರೊನಾ ಲಾಕ್ಡೌನ್ ಇದ್ದರೂ, ನಿಯಮಗಳನ್ನು ಸರ್ಕಾರ ಸಡಿಲ ಮಾಡಿದೆ. ಈ ಕಾರಣದಿಂದ ಕೆಲ ಪ್ರವಾಸಿ ತಾಣಗಳು ಓಪನ್ ಆಗಿವೆ. ಆದರೆ ಕೊರೊನಾ ಎಫೆಕ್ಟ್ ನಿಂದಾಗಿ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ನಿಷೇಧವಿದ್ದರೂ ಕೆಲವರು ನಂದಿ ಬೆಟ್ಟಕ್ಕೆ ಹೋಗಿದ್ದಾರೆ. ಹೀಗಾಗಿ ಪೊಲೀಸರು ಬೆಟ್ಟಕ್ಕೆ ಹೊರಟ್ಟಿದ್ದ ಪ್ರವಾಸಿಗರನ್ನು ಮಾರ್ಗ ಮಧ್ಯದಲ್ಲೇ ತಡೆದು ವಾಪಸ್ ಕಳುಹಿಸಿದ್ದಾರೆ. ಬೆಟ್ಟ ನೋಡಲು ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳಿದ್ದಾರೆ.