ಬೆಂಗಳೂರು: ಇಂದು ವಿಶ್ವಾದ್ಯಂತ ಹುಲಿ ದಿನಾಚರಣೆಯನ್ನು ಆಚರಿಸಲಾಗಿತ್ತು. ಅದೇ ರೀತಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಹ ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಅರಿವಿನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಬನ್ನೇರುಘಟ್ಟದಲ್ಲಿ ಹುಲಿ ದಿನಾಚರಣೆ ವೈವಿಧ್ಯಮಯವಾಗಿ ಆಚರಣೆ ಮಾಡಲಾಯಿತು. ಲಯನ್ಸ್ ಕ್ಲಬ್ ಹಾಗೂ ಎಸ್ಒಎಸ್ ಚಿಲ್ಡ್ರನ್ಸ್ ವಿಲೇಜಸ್ ಇಂಡಿಯಾದ 55ಕ್ಕೂ ಹೆಚ್ಚು ಮಕ್ಕಳಿಗೆ ಹುಲಿ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಪಡಿಸಲಾಗಿತ್ತು. ಮಕ್ಕಳು ಹುಲಿ ಮುಖವಾಡ ಧರಿಸಿ ಉದ್ಯಾನದಲ್ಲಿ ಜಾಥಾ ಮಾಡುವ ಮೂಲಕ ಸಂಭ್ರಮಿಸಿದರು. ಹಾಗೆ ಪಾರ್ಕಿಗೆ ಬಂದಿದ್ದ ಸಾರ್ವಜನಿಕರು ಸಹ ಭಾಗವಹಿಸಿ ಹುಲಿಗಳು ಹಾಗೂ ಅವುಗಳ ವಾಸಸ್ಥಾನ ಎಂಬ ವಿಷಯವನ್ನು ಆಧರಿಸಿ ನಡೆಸಿದ ಕಾರ್ಯಕ್ರಮದಲ್ಲಿ ಅನೇಕ ಬಗೆಯ ಮಾಹಿತಿಯನ್ನು ಪಡೆದುಕೊಂಡರು. ಇದನ್ನೂ ಓದಿ: ಬನ್ನೇರುಘಟ್ಟದಲ್ಲಿದೆ ಆರು ತಿಂಗಳ ‘ಹಿಮಾದಾಸ್’ ಹುಲಿಮರಿ
ಹುಲಿಗಳ ಚಲನ, ವಲನಗಳ ಬಗ್ಗೆ ಸಾರ್ವಜನಿಕರಿಗೆ ಅರಣ್ಯ ಅಧಿಕಾರಿಗಳು ಶಿಬಿರದಲ್ಲಿ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಓರ್ವ ವಿದ್ಯಾರ್ಥಿ ನಾವು ಹುಲಿ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಜೊತೆಗೆ ಹುಲಿ ಚಲನವಲನ ಬಗ್ಗೆ ಮತ್ತು ಎಷ್ಟು ಆಹಾರ ಸೇವಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ನಮಗೆ ಮಾಹಿತಿ ಕೊಟ್ಟಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅರ್ಚನಾ ಎಂಬವರು ಹಿಮ ಎಂಬ ಹುಲಿಯನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದಾರೆ.