– ಪಂಚಾಯಿತಿ ನಿಯಮ ಪಾಲಿಸದ್ದಕ್ಕೆ ಗ್ರಾಮಸ್ಥರಿಂದ ಕೃತ್ಯ
ಚೆನ್ನೈ: ಪ್ರೀತಿಸಿ ವಿವಾಹವಾಗಿದ್ದಕ್ಕೆ ದಂಡ ವಿಧಿಸಿದ್ದ 1,500 ರೂ.ಗಳನ್ನು ಕೊಡಲಿಲ್ಲವೆಂದು ಗ್ರಾಮಸ್ಥರು ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ತಮಿಳುನಾಡಿನ ಗೌತಮಪುರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ರವಿ ಎಂದು ಗುರುತಿಸಲಾಗಿದೆ. ಪಂಚಾಯಿತಿಯ ನಿಯಮದಂತೆ ಯುವಕನ ಕುಟುಂಬಸ್ಥರು 1,500 ರೂ. ನೀಡಲು ನಿರಾಕರಿಸಿದ ಹಿನ್ನೆಲೆ ಕೊಲೆ ಮಾಡಲಾಗಿದೆ. ಇಂತಹ ವಿಲಕ್ಷಣ ನಿಯಮವನ್ನು 10 ವರ್ಷಗಳ ಹಿಂದೆ ರೂಪಿಸಲಾಗಿದ್ದು, ಸ್ಥಳೀಯ ಕುಟುಂಬದ ಯಾವುದೇ ಸದಸ್ಯರು ಪ್ರೀತಿಸಿ ವಿವಾಹವಾದಲ್ಲಿ 1,500 ರೂ.ಗಳ ದಂಡವನ್ನು ಪಾವತಿಸಬೇಕು. ಈ ಹಣವನ್ನು ಊರಿನಲ್ಲಿ ಆಯೋಜಿಸುವ ಕಾರ್ಯಕ್ರಮ ಹಾಗೂ ಸಮಾರಂಭಗಳಿಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.
ರವಿಯವರ ಸೊಸೆ ಎರಡು ವರ್ಷಗಳ ಹಿಂದೆ ತನಗಿಷ್ಟ ಬಂದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಾಳೆ. ಆದರೆ ಪಂಚಾಯಿತಿಯ ನಿಯಮದಂತೆ ಹಣ ಪಾವತಿಸಲು ಮಹಿಳೆಯ ತಂದೆ ರವಿ ನಿರಾಕರಿಸಿದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಹತ್ತು ವರ್ಷಗಳ ಹಿಂದೆ ರವಿಯವರೇ ಈ ನಿಯಮ ಪರಿಚಯಿಸಿದ್ದರು ಎಂದು ಅಂಬಸಮುದ್ರಮ್ ಡಿಎಸ್ಪಿ ಸುಭಾಷಿಣಿ ಮಾಹಿತಿ ನೀಡಿದ್ದಾರೆ.
ರವಿಯವರು 1,500 ರೂ.ಗಳನ್ನು ಪಾವತಿಸಲು ನಿರಾಕರಿಸಿದ್ದು, ಹಣ ನೀಡುವುದು ತಡವಾಗಿದ್ದಕ್ಕೆ ಪಂಚಾಯಿತಿಯವರು 1 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. 10 ಜನ ಗ್ರಾಮಸ್ಥರು ರವಿ ಮನೆ ಬಳಿ ಬಂದು ವಾದ ಮಾಡಲು ಮುಂದಾಗಿದ್ದಾರೆ. ನಂತರ ಜಗಳ ತಾರಕಕ್ಕೇರಿದೆ. ಈ ವೇಳೆ ಗ್ರಾಮಸ್ಥರು ರವಿಯವರ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆ ನಂತರ ರವಿಯನ್ನು ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಆತ ದೂರು ನೀಡಲು ಆಗಮಿಸಿದ್ದ. ಆದರೆ ಪ್ರತಿ ಬಾರಿ ನಾವು ವಿಚಾರಣೆ ನಡೆಸುತ್ತೇವೆ. ಆದರೆ ರವಿ ವಿಚಾರಣೆಗೆ ಸಹಕರಿಸಲಿಲ್ಲ. ಈ ವಿಚಿತ್ರ ನಿಯಮವನ್ನು ರದ್ದುಪಡಿಸುವಂತೆ ಗ್ರಾಮಸ್ಥರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಗ್ರಾಮಸ್ಥರು ಇದನ್ನು ಮುಂದುವರಿಸಿದ್ದಾರೆ ಎಂದು ಡಿಎಸ್ಪಿ ತಿಳಿಸಿದ್ದಾರೆ.