ಅಹಮದಾಬಾದ್: ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಮೈದಾನದಲ್ಲೇ ಹತಾಶೆಯಾಗಿದ್ದನ್ನು ನೋಡಿದ ಕೊಹ್ಲಿ ಅವರನ್ನು ಸಮಾಧಾನ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.
ಬೆಂಗಳೂರು ಹಾಗೂ ಡೆಲ್ಲಿ ತಂಡಗಳ ನಡುವೆ ಮಂಗಳವಾರ ನಡೆದ ಪಂದ್ಯ ರೋಚಕತೆಯಿಂದ ಸಾಗಿ ಅಂತಿಮವಾಗಿ ಬೆಂಗಳೂರು ತಂಡ 1 ರನ್ನಿಂದ ಜಯ ಗಳಿಸಿತ್ತು. ಇತ್ತ ಗೆಲುವಿಗಾಗಿ ಅಂತಿಮ ಕ್ಷಣದ ವರೆಗೆ ಹೋರಾಡಿ ಗೆಲುವು ದಕ್ಕಿಸಿಕೊಳ್ಳಲಾಗದೆ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಮೈದಾನದಲ್ಲೇ ಹತಾಶೆಗೊಳಗಾದರು. ಇವರನ್ನು ಕಂಡ ಎದುರಾಳಿ ತಂಡದ ನಾಯಕ ವಿರಾಟ್ ಕೊಹ್ಲಿ, ಪಂತ್ರನ್ನು ಸಮಾಧಾನ ಮಾಡಿದ್ದಾರೆ.
ಐಪಿಎಲ್ನ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ತಂಡ ಸೆಣಸಾಡಿದೆ. ಐಪಿಎಲ್ನ ಮೊದಲ ಸುತ್ತಿನ ಲೀಗ್ ಪಂದ್ಯದ ಬಳಿಕ ಇದೀಗ ಎರಡನೇ ಸುತ್ತಿನ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದೆ. ಕೊರೊನಾ ಮಧ್ಯೆ ನಡೆಯುತ್ತಿರುವ ಪಂದ್ಯಗಳು ಬಹಳ ರೋಚಕತೆಯಿಂದ ಸಾಗುತ್ತಿದ್ದು ಹಲವು ಪಂದ್ಯಗಳು ಕೊನೆಯ ಬಾಲ್ ವರೆಗೂ ಪಂದ್ಯದ ರೋಚಕತೆಯನ್ನು ಕಾಪಾಡಿಕೊಳ್ಳುತ್ತಿದೆ.
ಡೆಲ್ಲಿ ತಂಡದ ಖಾಯಂ ನಾಯಕ ಶ್ರೇಯಸ್ಸ್ ಅಯ್ಯರ್ ಗಾಯದಿಂದಾಗಿ ಈ ಬಾರಿ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಪಂತ್. ತಂಡದ ಗೆಲುವಿಗಾಗಿ ಬಹಳ ಹೋರಾಟ ನಡೆಸುತ್ತಿದ್ದಾರೆ. ಡೆಲ್ಲಿ ಮತ್ತು ಬೆಂಗಳೂರು ನಡುವಿನ ಪಂದ್ಯಾಟದಲ್ಲಿ ಡೆಲ್ಲಿ ತಂಡ ಬಹಳ ಪೈಪೋಟಿ ನೀಡಿ ಕೊನೆಯಲ್ಲಿ ಒಂದು ರನ್ನಿಂದ ವಿರೋಚಿತ ಸೋಲು ಕಾಣಬೇಕಾಯಿತು.
ಕೊನೆಯ ಬಾಲ್ನಲ್ಲಿ ಡೆಲ್ಲಿ ತಂಡಕ್ಕೆ 6 ರನ್ಗಳ ಅವಶ್ಯಕತೆ ಇತ್ತು. ಬ್ಯಾಟಿಂಗ್ನಲ್ಲಿ ಪಂತ್ ಮತ್ತು ಶಿಮ್ರಾನ್ ಹೆಟ್ಮಿಯರ್ ಇದ್ದರು. ಪಂತ್ ಸ್ಟೈಕ್ನಲ್ಲಿದ್ದರೂ ಕೂಡ ಅವರಿಂದ ಕೊನೆಯ ಬಾಲ್ನಲ್ಲಿ ಬೌಂಡರಿ ಹೊಡೆಯಲು ಮಾತ್ರ ಸಾಧ್ಯವಾಯಿತು. ಈ ಮೂಲಕ 1 ರನ್ಗಳ ಸೋಲು ಕಂಡಿತು.
ಇದರಿಂದ ತುಂಬಾ ಬೇಸರಗೊಳಗಾದ ಪಂತ್ರನ್ನು ಕಂಡ ಕೊಹ್ಲಿ ಕೂಡಲೇ ಅವರ ಬಳಿ ಬಂದು ಅವರ ಬ್ಯಾಟಿಂಗ್ ಬಗ್ಗೆ ಹೊಗಳಿ ಅವರನ್ನು ಸಮಾಧಾನ ಪಡಿಸಿದರು. ಅದೇ ರೀತಿ ಇನ್ನೊಂದು ಬದಿಯಲ್ಲಿ ಕುಸಿದು ಕುಳಿತಿದ್ದ ಹೆಟ್ಮಿಯರ್ ಅವರ ಬಳಿ ಬಂದು ಅವರ ತಲೆ ಸವರಿ ಕೊಹ್ಲಿ ಸಮಾಧಾನ ಪಡಿಸಲು ಮುಂದಾದರು ಇದನ್ನು ಕಂಡ ಕ್ರೀಡಾಭಿಮಾನಿಗಳು ಕೊಹ್ಲಿಯ ಕ್ರೀಡಾ ಸ್ಪೂರ್ತಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಪಂದ್ಯದ ಬಳಿಕ ಕೊಹ್ಲಿ ಹಾಗೂ ಪಂತ್ ಪಂದ್ಯದ ಕುರಿತು ಚರ್ಚೆನಡೆಸುತ್ತಿದ್ದರು. ಈ ವೀಡಿಯೋವನ್ನು ತಮ್ಮ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಡೆಲ್ಲಿ ಹಾಗೂ ಬೆಂಗಳೂರು ಫ್ರಾಂಚೈಸಿಗಳು ಹಂಚಿಕೊಂಡಿದೆ. ಇದನ್ನು ಗಮನಿಸಿರುವ ಅಭಿಮಾನಿಗಳು ಪಂದ್ಯದಲ್ಲಿ ಬೆಂಗಳೂರು ಗೆದ್ದಿರಬಹುದು. ಆದರೆ ಅಂತಿಮವಾಗಿ ಈ ವೀಡಿಯೋ ನೋಡಿದಾಗ ಇಲ್ಲಿ ಕ್ರಿಕೆಟ್ ಗೆದ್ದಿದೆ ಎಂದು ಅನಿಸುತ್ತಿದೆ ಎಂಬುದಾಗಿ ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.
ಐಪಿಎಲ್ನಲ್ಲಿ ಬೇರೆ ಬೇರೆ ತಂಡದಲ್ಲಿ ಆಟಗಾರ ಕಾಣಿಸಿಕೊಂಡರೂ ಕೂಡ ಸೋಲು ಗೆಲುವು ಸಿಕ್ಕೊಡನೆ ಎದುರಾಳಿ ತಂಡದೊಂದಿಗೆ ಉತ್ತಮವಾಗಿ ಬೆರೆಯುವ ಮನೋಭಾವವನ್ನು ಕಂಡು ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.