– ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇಲ್ಲ
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಇಂದು ರಣಕೇಕೆ ಹಾಕಿದೆ. ಮೂವರು ಮಕ್ಕಳು ಸೇರಿದಂತೆ ಬರೋಬ್ಬರಿ 22 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೊಪ್ಪಳ ಡಿಸಿ ಸುನೀಲ್ ಕುಮಾರ್ ಹೇಳಿದ್ದಾರೆ.
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲೇ ಐದು ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. 19 ವರ್ಷದ ಯುವತಿ, 18 ವರ್ಷದ ಯುವಕ, 6 ವರ್ಷದ ಮಗು, 45 ಮತ್ತು 37 ವರ್ಷದ ಪುರುಷರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಶ್ರೀರಾಮನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗಂಗಾವತಿ ತಾಲೂಕಿನ ಅಡವಿಭಾವಿ ಗ್ರಾಮದ 42 ವರ್ಷದ ಮಹಿಳೆ, ಗಂಗಾವತಿ ನಗರದ 18 ವರ್ಷದ ಯುವತಿಗೆ ಕೊರೊನಾ ದೃಢಪಟ್ಟಿದೆ. ತಾಲೂಕಿನ ಮರಳಿ ಗ್ರಾಮದ 56 ವರ್ಷದ ವ್ಯಕ್ತಿಗೂ ಹಾಗೂ ಕಾರಟಗಿಯ 23 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ. ಅಲ್ಲದೇ ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮದಲ್ಲಿ 2 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 32 ವರ್ಷದ ವ್ಯಕ್ತಿ ಹಾಗೂ 40 ವರ್ಷದ ಮಹಿಳಿಗೆ ಸೋಂಕು ತಗುಲಿದೆ. ಕುಷ್ಟಗಿ ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ 3 ವರ್ಷದ ಬಾಲಕನಿಗೆ ಕೊರೊನಾ ದೃಢಪಟ್ಟಿದೆ. ಪರಿಣಾಮ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮಕ್ಕೆ ಕೊರೊನಾ ಪ್ರವೇಶ ನೀಡಿದ್ದು, ಇಂದು 34 ವರ್ಷದದ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದೆ. ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ 25 ವರ್ಷದ ಯುವಕನಿಗೆ ಮತ್ತು ಗೋರ್ಲೇಕೊಪ್ಪ ಗ್ರಾಮದ 12 ವರ್ಷದ ಬಾಲಕನಿಗೆ ಮತ್ತು ಯರಡೋಣಿ ಗ್ರಾಮದ 55 ವರ್ಷದ ವ್ಯಕ್ತಿಗೂ ಸೋಂಕು ತಗುಲಿದೆ. ಪರಿಣಾಮ ಯಲಬುರ್ಗಾ ತಾಲೂಕಿನ ಗ್ರಾಮಗಳಿಗೂ ಕೊರೊನಾ ಎಂಟ್ರಿ ಕೊಟ್ಟಿರುವುದಿಂದ ತಾಲೂಕಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಕೊಪ್ಪಳ ತಾಲೂಕಿನಲ್ಲೂ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ತಾಲೂಕಿನ ಹಿರೇಬಗನಾಳ ಗ್ರಾಮದ 31 ವರ್ಷದ ವ್ಯಕ್ತಿಗೆ, ಗೊಬ್ಬೂರ ಗ್ರಾಮದಲ್ಲಿ 2 ವರ್ಷದ ಮಗೂ ಸೇರಿದಂತೆ 25 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಇನ್ನು ಹುಲಗಿ ಗ್ರಾಮದಲ್ಲಿ ಇಬ್ಬರು ಮಹಿಳೆಯರಿಗೆ, ಹೊಸಲಿಂಗಾಪುರ ಗ್ರಾಮದಲ್ಲಿ ಒಬ್ಬರಿಗೆ ಕೊರೊನಾ ದೃಢ ಪಟ್ಟಿದೆ. ಇದು ಜಿಲ್ಲೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಇಂದು ಪ್ರಕಟಗೊಂಡ ಕೊರೊನಾ ದೃಢಪಟ್ಟ ಪ್ರಕರಣಗಳಲ್ಲಿ ಸೋಂಕಿನ ರೋಗ ಲಕ್ಷಣಗಳೇ ಇಲ್ಲದಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಪರಿಣಾಮ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮನವಿ ಮಾಡಿಕೊಂಡಿದೆ.