‘ಮಹಿಷಾಸುರ’ ಸ್ಯಾಂಡಲ್ವುಡ್ನಲ್ಲಿ ರಿಲೀಸ್ ಗೆ ರೆಡಿಯಾಗಿ ನಿಂತಿರೋ ಸಿನಿಮಾ. ನೈಜ ಘಟನೆ ಆಧಾರಿತ ಈ ಚಿತ್ರದ ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬಂದಿದ್ದು, ಜನವರಿ 8ರಂದು ಮಹಿಷಾಸುರ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದೊಡ್ಡಬಳ್ಳಾಪುರದ ಮೆಳೆಕೋಟೆಯಲ್ಲಿ ಹಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ‘ಮಹಿಷಾಸುರ’ ಚಿತ್ರಕ್ಕೆ ಸ್ಪೂರ್ತಿ. ಉದಯ್ ಪ್ರಸನ್ನ ಈ ಚಿತ್ರದ ಸೂತ್ರದಾರ. ತಾವೇ ಕಥೆ ಬರೆದು ನಿರ್ದೇಶಕನಾಗಿ ಮೊದಲ ಹೆಜ್ಜೆಯನ್ನು ಚಿತ್ರರಂಗದಲ್ಲಿ ಇಟ್ಟಿದ್ದಾರೆ ಉದಯ್ ಪ್ರಸನ್ನ. ರಿಯಲ್ ಸ್ಟಾರ್ ಉಪೇಂದ್ರ, ಪ್ರೇಮ್ ಇವರ ನಿರ್ದೇಶನ ಜೀವನಕ್ಕೆ ಸ್ಪೂರ್ತಿ. ನಟನಾಗಬೇಕೆಂದು ಗಾಂಧಿ ನಗರಕ್ಕೆ ಬಂದ ಉದಯ್ ಪ್ರಸನ್ನ ಈಗ ಡೈರೆಕಟ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟ ಇವರು ಸಂಜಯ್ ಕುಲಕರ್ಣಿ, ಸಲೀಂ ರಾಜು, ಹೇಮಂತ್ ಹೆಗ್ಡೆ ಸೇರಿದಂತೆ ಹಲವು ನಿರ್ದೇಶಕರ ಜೊತೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ತಮ್ಮ ಮೊದಲ ಕನಸಿನ ಹೆಜ್ಜೆ ‘ಮಹಿಷಾಸುರ’ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದು, ಪ್ರೇಕ್ಷಕರು ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.
ಮೇಲ್ವರ್ಗದವರಿಂದ ಕೆಳವರ್ಗದವರ ಮೇಲೆ ನಡೆಯುವ ದಬ್ಬಾಳಿಕೆ ಹಾಗೂ ಸತ್ಯಾಸತ್ಯತೆ ಹೊರಬಿದ್ದಾಗ ಆಗುವ ಪರಿಣಾಮಗಳನ್ನು ಚಿತ್ರದಲ್ಲಿ ರಿಯಾಲಿಸ್ಟಿಕ್ ಆಗಿ ಕಟ್ಟಿಕೊಡಲಾಗಿದ್ದು, ಸಮಾಜಕ್ಕೆ ಒಂದು ಸೂಕ್ತ ಸಂದೇಶವನ್ನು ‘ಮಹಿಷಾಸುರ’ ಸಿನಿಮಾ ನೀಡಲಿದೆ ಎನ್ನುತ್ತಾರೆ ನಿರ್ದೇಶಕ ಉದಯ್ ಪ್ರಸನ್ನ. ರಿಯಾಲಿಸ್ಟಿಕ್ ಆಗಿ ಮೂಡಿ ಬಂದಿರೋ ಈ ಚಿತ್ರದಲ್ಲಿ ನವ ಕಲಾವಿದರೇ ಹೆಚ್ಚಾಗಿ ಅಭಿನಯಿಸಿರೋದು ವಿಶೇಷ. ಚಿತ್ರದಲ್ಲಿ ಟ್ರಯಂಗಲ್ ಲವ್ ಸ್ಟೋರಿ ಇರಲಿದ್ದು, ಸುದರ್ಶನ್, ರಾಜ್ ಮಂಜು ಇಬ್ಬರು ನಾಯಕ ನಟರಾಗಿ ನಟಿಸಿದ್ದು, ನಾಯಕಿಯಾಗಿ ಬಿಂದು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸುನಿಲ್ ಕೌಶಿ, ಸಾಯಿ ಕಿರಣ್ ಸಂಗೀತ ನಿರ್ದೇಶನವಿದ್ದು, ಕೃಷ್ಣ ಅವರ ಛಾಯಾಗ್ರಹಣವಿದೆ. ಮೆಳೆಕೋಟೆ ಟೂರಿಂಗ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್ ಮತ್ತು ಪ್ರೇಮಾ ಚಂದ್ರಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜನವರಿ 8ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಸಿನಿರಸಿಕರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ‘ಮಹಿಷಾಸುರ’ ಚಿತ್ರತಂಡ.