– ಇನ್ಮುಂದೆ ನನ್ನಿಂದ ಆಗಲಾರದು ಸಾಲು ಬರೆದ ಪತ್ರ ಪತ್ತೆ
ಜೈಪುರ: ಡೆತ್ ನೋಟ್ ಬರೆದಿಟ್ಟು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜೋಧಪುರದಲ್ಲಿ ನಡೆದಿದೆ. ವಿದ್ಯಾರ್ಥಿ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗೇನಾರಾಮ್ ದೇವಾಸಿ ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ. ಜಾಲೌರ ಜಲ್ಲೆಯ ರಾಂಸೀನ್ ನಿವಾಸಿಯಾಗಿದ್ದ ಗೇನಾರಾಮ್ ಜೋಧಪುರ ನಗರದ ಎಸ್ಎನನ್ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದು, ವಿದ್ಯಾಲಯದ ಹಾಸ್ಟೆಲ್ ನಲ್ಲಿ ವಾಸವಾಗಿದ್ದನು. ಶನಿವಾರ ಸಂಜೆ ಸುಮಾರು 7.30ಕ್ಕೆ ಕೊನೆಯ ಬಾರಿ ಗೇನಾರಾಮ್ ಗೆಳೆಯರನ್ನ ಭೇಟಿಯಾಗಿದ್ದ. ಸಂಜೆ ರೂಮ್ ಸೇರಿದ ಬಳಿಕ ಆತನ ರೂಮೇಟ್ ಬಾಗಿಲು ತೆಗೆಯುವಂತೆ ಹೇಳಿದ್ದಾನೆ. ತುಂಬಾ ಸಮಯ ಗೇನಾರಾಮ್ ಹೊರ ಬಾರದಿದ್ದಾಗ ವಿದ್ಯಾರ್ಥಿಗಳು ಬಾಗಿಲು ಮುರಿದು ನೋಡಿದಾಗ ಶವ ಫ್ಯಾನ್ ನಲ್ಲಿ ನೇತಾಡುತ್ತಿತ್ತು.
ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ಮತ್ತು ಹಾಸ್ಟೆಲ್ ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಶವವನ್ನ ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಸ್ಥಳಾಂತರಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೇನಾರಾಮ್ ಪರೀಕ್ಷೆಗೂ ಗೈರಾಗಿದ್ದನು. ಶನಿವಾರ ಗೇನಾರಾಮ್ ಹೊಸ ಹಗ್ಗ ತಂದಿರೋದನ್ನ ಕೆಲವರು ಗಮನಿಸಿದ್ದಾರೆ.
ಡೆತ್ನೋಟ್: ಮಮ್ಮಿ, ಪಪ್ಪಾ, ಚಿಕ್ಕಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ. ಕಳೆದ ಎರಡು ತಿಂಗಳಿನಿಂದ ತುಂಬಾ ಒತ್ತಡದಲ್ಲಿದ್ದೇನೆ. ಇನ್ಮುಂದೆ ಇದು ನನ್ನಿಂದ ಆಗಲಾರದು ಎಂದು ಗೇನಾರಾಮ್ ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ.