– ತನಿಖೆ ಆಗ್ಲಿ, ಎಲ್ಲದಕ್ಕೂ ನಾನು ಸಿದ್ಧ
ಮೈಸೂರು: ಮನೆ ಕಟ್ಟಿದವರು ನಾನು, ರಾಜ್ಯಕ್ಕೆ ಆಳಲು ಬರೋದು ನೂರಾರು ಜನ ಇರ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಶಾಸಕ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನ ಮೈಸೂರು ಮಹಾ ನಗರ ಪಾಲಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ತನ್ವೀರ್ ಸೇಠ್ ಅಮಾನತ್ತಿಗೆ ಆಗ್ರಹಿಸಿದ್ದರು. ಇದಕ್ಕೆ ಇವತ್ತು ಮೈಸೂರಿನಲ್ಲಿ ತನ್ವೀರ್ ಸೇಠ್ ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ನನ್ನ ವಿರುದ್ಧ ನಮ್ಮ ಪಕ್ಷದ ಒಬ್ಬ ನಾಯಕರು ಪಿತೂರಿ ಮಾಡಿ ಸುದ್ದಿಗೋಷ್ಠಿ ಮಾಡಿಸಿದ್ದಾರೆ. ಅವರೇ ಎಲ್ಲರಿಗೂ ಕರೆ ಮಾಡಿ ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸುವಂತೆ ಹೇಳಿದ್ದಾರೆ. ಸುದ್ದಿಗೋಷ್ಠಿ ಮಾಡಿದ್ದರ ಹಿಂದೆ ಒಬ್ಬ ನಾಯಕರ ಪಿತೂರಿ ಇದೆ ಎಂದು ಆರೋಪಿಸಿದರು.
ಮನೆ ಕಟ್ಟಿರೋದು ನಾವು. ರಾಜ್ಯ ಅಳೋಕೆ ಬರೋರು ನೂರೆಂಟು ಜನ ಇರಬಹುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಟೀಕಿಸಿದರು. ಪಕ್ಷದ ಒಳಗೆ ಗುಂಪಾಗಾರಿಕೆ ಮಾಡಿಸುವುದು ಪಕ್ಷದ ಬೆಳವಣಿಗೆಗೆ ಮಾರಕ. ನನ್ನ ನೇರವಾಗಿ ಸಿದ್ದರಾಮಯ್ಯ ಕರೆದು ವಿವರಣೆ ಕೇಳಿದ್ದರೆ ಕೊಡುತ್ತಿದ್ದೆ. ಆದರೆ ಮಧ್ಯವರ್ತಿಗಳ ಮೂಲಕ ನಾನು ಮಾತಾಡಲ್ಲ. ಈಗ ಈ ಕಾಲವೂ ಮಿಂಚಿ ಹೋಗಿದೆ. ಪಕ್ಷದ ಮೂಲಕವಷ್ಟೆ ನನ್ನ ಸಮಾಜಾಯಿಷಿ ನೀಡುತ್ತೇನೆ. ನನ್ನನ್ನು ಬೇಕಾದರೆ ಅಮಾನತ್ತು ಮಾಡಿ ಎಂದ ಅವರು ನಿನ್ನೆ ಧಿಕ್ಕಾರ ಕೂಗಿಸಿದ್ದು ನಾನಲ್ಲ. ನಾನು ಮಾಡಿಸಿದ್ದು ಅಂತಾ ಸಾಬೀತು ಮಾಡಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರ ಜೊತೆ ನಾನು ಮಾತಾಡಿಲ್ಲ. ನಾನು ಬೆಳೆದಿರೋ ರೀತಿ ಬೇರೆ. ನನಗೂ ಸ್ವಾಭಿಮಾನ ಇದೆ. ನನ್ನನ್ನು ವಜಾ ಮಾಡುತ್ತಾರಾ? ಅಮಾನತ್ತು ಮಾಡುತ್ತಾರಾ? ಮಾಡಲಿ. ಬಿಜೆಪಿ ಮೇಯರ್ ಆಗಿದ್ದರೆ ಮುಸ್ಲಿಮರಿಗೆ ಇವರೇ ಹೇಳುತ್ತಿದ್ರು ನೋಡಿ ತನ್ವೀರ್ ಸೇಠ್, ಬಿಜೆಪಿ ಅವರನ್ನು ಮೇಯರ್ ಆಗೋಕೆ ಬಿಟ್ಟ ಅಂತಾ. ನನ್ನ ಬಲಿಪಶು ಮಾಡುವ ತಂತ್ರವೂ ಇದರಲ್ಲಿ ಇತ್ತು ಎಂದರು.