ಆನೇಕಲ್: ಇಂದು ಬೆಳಂಬೆಳಗ್ಗೆ ಇಬ್ಬರು ಪೊಲೀಸರು ಕೊಲೆ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.
ಸೈಕೋ ಅಲಿಯಾಸ್ ವೇಲು ಮತ್ತು ಬಾಲ ಅಲಿಯಾಸ್ ಬಾಲಕೃಷ್ಣ ಕೊಲೆ ಆರೋಪಿಗಳು. ಇವರು ಒಂದು ವಾರಗಳ ಹಿಂದೆ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಬಳಿಯ ಒಂಟಿ ಮನೆಯಲ್ಲಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.
ಮನೆಯಲ್ಲಿದ್ದ ಶ್ವೇತಾ ಎಂಬವರ ಮಾಂಗಲ್ಯ ಸರ ಕಳ್ಳತನ ಮಾಡಿ ನಂತರ ಕೊಲೆ ಮಾಡಿದ್ದರು. ಇದೀಗ ಇಬ್ಬರ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.
ಆನೇಕಲ್ ತಾಲೂಕಿನ ಮುತ್ಯಾಲಮಡುವಿನ ಬಳಿ ರಾತ್ರಿ ಆರೋಪಿಗಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಹೆಬ್ಬಗೋಡಿ ಇನ್ಸ್ಪೆಕ್ಟರ್ ಗೌತಮ್ ಮತ್ತು ಬನ್ನೇರುಘಟ್ಟ ಎಸ್ಐ ಗೋವಿಂದ್ ಬಂಧಿಸಲು ಹೋದ ಸಂದರ್ಭದಲ್ಲಿ ಪೊಲಿಸರ ಮೇಲೆಯೇ ಆರೋಪಿಗಳು ಹಲ್ಲೆಗೆ ಮುಂದಾಗಿದ್ದರು. ಚೂಪಾದ ಕತ್ತಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ನೀಡಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವೇಲೂ ಅಲಿಯಾಸ್ ಸೈಕೋ ವೇಲೂ ಮತ್ತು ಬಾಲಾಜಿ, ಬೆಂಗಳೂರು ಸುತ್ತಮುತ್ತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.