ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬರುವುದಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಸಚಿವ ಸಿ.ಟಿ.ರವಿ, ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಜಿಲ್ಲೆಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೋವಿಡ್ ಕುರಿತಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನನ್ನನ್ನ ನೇಣಿಗೆ ಏರಿಸಿ ಎಂದಿದ್ದಾರೆ. ಆದರೆ ಅವರು ಪ್ರಾಮಾಣಿಕರ ಎಂಬುದನ್ನ ಅವರ ಆತ್ಮಸಾಕ್ಷಿಗೆ ಪ್ರಶ್ನೆ ಕೇಳಿಕೊಳ್ಳಲಿ. ನಾವು ನೇಣಿಗೆ ಏರಿಸಬೇಕಾದ ಅವಶ್ಯಕತೆ ಇಲ್ಲ ಎಂದರು. ನೀವು ಪ್ರಾಮಾಣಿಕನೋ ಹೌದೋ, ಅಲ್ವೋ ಎಂದು ಆತ್ಮಸಾಕ್ಷಿಯೇ ಹೇಳುತ್ತೆ. ಅದರ ಮೇಲೆ ಅವರು ಇನ್ನೊಬ್ಬರ ಮೇಲೆ ಆರೋಪ ಮಾಡಲಿ ಎಂದಿದ್ದಾರೆ.
ಇದೇ ವೇಳೆ, ಯಾರು, ಯಾವಾಗ, ಎಲ್ಲೆಲ್ಲಿ, ಯಾರಿಗೆ ಕಾಲಿಗೆ ಬಿದ್ದರೋ ಗೊತ್ತಿಲ್ಲ. ಆದರೆ ರಾಜಕಾರಣಕ್ಕಾಗಿ ಕಾಲಿಡಿಯುವುದು ತಪ್ಪು. ಹಿರಿತನಕ್ಕೆ ಅವರಿಗಿರುವ ಸಂಸ್ಕಾರಕ್ಕೆ ಕಾಲಿಗೆ ಬೀಳೋದು ತಪ್ಪಲ್ಲ. ಸ್ವಾಮೀಜಿಗಳ ಕಾಲಿಡಿಯುತ್ತೇವೆ. ಅದು ಅವರ ಪರಂಪರೆಗೆ ಕೊಡುವ ನಮಸ್ಕಾರ. ನಮಗಿಂತ ದೊಡ್ಡವರಿಗೆ ನಮಸ್ಕಾರ ಮಾಡುತ್ತೀವಿ. ಅದು ನಾವು ಬೆಳೆದು ಬಂದ ಸಂಸ್ಕಾರ. ಆದರೆ ಕಾಲಡಿಯುವುದು ರಾಜಕೀಯಕ್ಕೆ ಬಳಕೆಯಾಗುವುದು ತಪ್ಪು. ರಾಜಕೀಯ ಕೆಸರೆರಚಾಟಕ್ಕೆ ಬಳಕೆಯಾಗುವುದು ಸರಿಯಲ್ಲ ಎಂದರು.
ಇನ್ನೂ ಸಿ.ಪಿ.ಯೋಗೀಶ್ವರ್ ಅವರಿಗೆ ಚಿಕ್ಕಮಗಳೂರಿಗೆ ಆಹ್ವಾನ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೂ ಬಿಜೆಪಿಯೇ ಇದೆ. ಇದು ನಿಮಗೆ ಮಾದರಿ. ನೀವು ಹಾಗೇ ರಾಮನಗರದಲ್ಲಿ ಎದುರಿಸಿ ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೂ ಬಿಜೆಪಿ ಕಟ್ಟಿ, ಬೆಳೆಸಿ. ಆಗ ರಾಮನಗರ ಕೂಡ ಮಾದರಿ ಜಿಲ್ಲೆಯಾಗುತ್ತೆಂದು ಯೋಗೀಶ್ವರ್ಗೆ ಚಿಕ್ಕಮಗಳೂರಿಗೆ ಆಹ್ವಾನ ನೀಡಿದ್ದಾರೆ.