ಇಸ್ಲಾಮಾಬಾದ್: ಭಾರತ ಐಸಿಸಿ ವಿಶ್ವಕಪ್ನ ಮುಂದಿನ ಎರಡು ಪ್ರಮುಖ ವಿಶ್ವಕಪ್ ಟೂರ್ನಿಗಳಿಗೆ ಅತಿಥ್ಯ ವಹಿಸಿಕೊಳ್ಳಲಿದೆ. ಪರಿಣಾಮ ಎರಡು ಟೂರ್ನಿಗಳಲ್ಲಿ ಪಾಕಿಸ್ತಾನದ ಆಡಲು ಆಟಗಾರರಿಗೆ ಭಾರತಕ್ಕೆ ಬರಲು ಅವಕಾಶ ನೀಡ್ತಾರಾ? ಎಂಬ ಸಂದೇಹ ಪಾಕಿಸ್ತಾನ ಕ್ರಿಕಟ್ ಬೋರ್ಡ(ಪಿಸಿಬಿ)ನ್ನು ಕಾಡಲು ಆರಂಭಿಸಿದೆ. ಪರಿಣಾಮ ಪಿಸಿಬಿ, ಐಸಿಸಿಗೆ ವಿಶೇಷ ಮನವಿವೊಂದನ್ನು ಮುಂದಿಟ್ಟಿದೆ.
2021ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ಕ್ರಿಕೆಟ್ ಟೂರ್ನಿಗೆ ಭಾರತ ಅತಿಥ್ಯವಹಿಸಲಿದೆ. ಪರಿಣಾಮ ಪಿಸಿಬಿ, ಐಸಿಸಿಗೆ ವಿಶೇಷ ಮನವಿ ಸಲ್ಲಿಸಿದೆ. ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಲು ಪಾಕಿಸ್ತಾನ ಆಟಗಾರರಿಗೆ ಭಾರತಕ್ಕೆ ಪ್ರವೇಶ ನೀಡುವುದಾಗಿ ಬಿಸಿಸಿಐ ಲಿಖಿತ ಪೂರ್ವಕವಾಗಿ ಭರವಸೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಪಿಸಿಬಿ ಸಿಇಒ ವಸೀಂ ಖಾನ್, 2021, 2023ರ ವಿಶ್ವಕಪ್ ಟೂರ್ನಿಗಳಿಗೆ ಭಾರತ ಅತಿಥ್ಯ ವಹಿಸಲಿದೆ. ಈ ಎರಡು ಟೂರ್ನಿಗಳಲ್ಲಿ ಆಡಲು ಪಾಕಿಸ್ತಾನ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಬಿಸಿಸಿಐನಿಂದ ಲಿಖಿತ ಭರವಸೆಯನ್ನು ಕೊಡಿಸುವಂತೆ ಐಸಿಸಿಗೆ ಮನವಿ ಮಾಡಿದ್ದೇವೆ. ಮುಖ್ಯವಾಗಿ ವೀಸಾ ಕುರಿತ ಎಲ್ಲಾ ಕ್ಲಿಯರೆನ್ಸ್ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಕೆಲ ಸಮಯದಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಎರಡು ದೇಶಗಳ ಕ್ರಿಕೆಟ್ ತಂಡಗಳು ಐಸಿಸಿ ಮತ್ತು ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ. 2018ರ ಏಷ್ಯಾಕಪ್ಗೆ ಭಾರತ ಆತಿಥ್ಯವಹಿಸಬೇಕಿತ್ತು. ಆದರೆ ಭಾರತ ಸರ್ಕಾರ, ಪಾಕ್ ಕ್ರಿಕೆಟ್ ತಂಡಕ್ಕೆ ದೇಶಕ್ಕೆ ಆಗಮಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಯುಎಇನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ 2021, 2023ರ ವಿಶ್ವಕಪ್ ಟೂರ್ನಿಗಳನ್ನು ಬೇರೆಡೆ ಆಯೋಜಿಸಲು ಬಿಸಿಸಿಐ ಸಿದ್ಧವಿಲ್ಲ ಎನ್ನಲಾಗಿದೆ. ಪರಿಣಾಮ ಪಿಸಿಬಿ ಸಮಸ್ಯೆ ಅರಿತು ಈಗಾಗಲೇ ತನ್ನ ಪ್ರಯತ್ನಗಳನ್ನು ಆರಂಭಿಸಿದೆ.