ಬೆಂಗಳೂರು: ಮಹಾನಗರದಲ್ಲಿ ಬಿಡಿಎ ಕಾಯಿದೆ ಉಲ್ಲಂಘನೆ ಮಾಡಿ ಮನೆ ಕಟ್ಟಿಕೊಂಡಿರುವ ಮಂದಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಿಯಮ ಉಲ್ಲಂಘಿಸಿನೆ ಮನೆ ಕಟ್ಟಿದ್ದರೆ ದಂಡ ಕಟ್ಟಿಸಿಕೊಂಡು ಕಾನೂನು ಬದ್ಧ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಬಿಡಿಎ 38 ಜ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ತಿದ್ದುಪಡಿ ಅನ್ವಯ 12 ವರ್ಷದ ಹಿಂದೆ ಮನೆ ಕಟ್ಟಿಕೊಂಡಿದ್ದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. 20*30 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಮಾರುಕಟ್ಟೆ ಮೌಲ್ಯದ ಶೇ.10ರಷ್ಟು ದಂಡ ಕಟ್ಟಬೇಕಿದೆ. 30*40 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಮಾರುಕಟ್ಟೆ ಮೌಲ್ಯದ ಶೇ.20ರಷ್ಟು ದಂಡ ಪಾವತಿಸಬೇಕು. 40*50 ಹಾಗೂ 50*80 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಶೇ.40 ರಷ್ಟು ಮಾರುಕಟ್ಟೆ ಮೌಲ್ಯದ ದಂಡ ಕಟ್ಟ ಬೇಕಿದೆ.
ಉಳಿದಂತೆ 50*80 ನಂತರದ ಕಟ್ಟಡಗಳಿಗೆ ಯಾವುದೇ ಸಕ್ರಮ ಮಾಡಲ್ಲ. ಖಾಲಿ ನಿವೇಶನ ಮತ್ತು ಹೊಸದಾಗಿ ಮನೆ ಕಟ್ಟಿಕೊಂಡಿರುವವರಿಗೆ ಈ ಸೌಲಭ್ಯ ಅನ್ವಯ ಆಗುವುದಿಲ್ಲ. ಇದರಿಂದ ಅಂದಾಜು 50 ಸಾವಿರ ಮಂದಿಗೆ ಲಾಭ ಆಗಲಿದೆ.