ಮಂಡ್ಯ: ಬಿಜೆಪಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಶಾಸಕರಲ್ಲಿ ಕೆಲವರು ಬರಲು ರೆಡಿ ಇದ್ದಾರೆ. ಯಾರು ಯಾರು ಬರುತ್ತಾರೆ ಎಂದು ಈಗಲೇ ಹೇಳಿ ಬಿಟ್ಟರೆ ಮಾಧ್ಯಮದವರು ಬ್ಲಾಸ್ಟ್ ಮಾಡಿಬಿಡುತ್ತಾರೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸಂಪರ್ಕದಲ್ಲಿ ಇರುವುದು ಸತ್ಯ. ಯಾರು ಯಾರು ಇದ್ದಾರೆ ಎಂದು ಬಹಿರಂಗ ಪಡಿಸಲು ಈಗ ಸಾಧ್ಯವಿಲ್ಲ. ಆ ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ ಎಂದು ಹೇಳಿದ್ದಾರೆ.
ಶಾಸಕರು ಬಿಜೆಪಿಗೆ ಬರಲು ಸಿದ್ದವಾಗಿದ್ದಾರೆ. ಆದರೆ ನಮಗೆ ಅವಶ್ಯಕತೆ ಇಲ್ಲ. ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಹೀಗಾಗಿ ಅವರು ಯಾರು ಎಂದು ಸಮಯ ಬಂದಾಗ ಹೇಳುತ್ತೇನೆ. ಇನ್ನೂ 25 ವರ್ಷ ಬಿಜೆಪಿ ಸರ್ಕಾರವನ್ನು ಯಾರು ಕೂಡ ಟಚ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ರಾಮ ಮಂದಿರ ನಿಧಿ ಸಂಗ್ರಹಣೆ ವಿಚಾರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹಣ ಕೊಡುವುದಕ್ಕೆ ಇಷ್ಟ ಇಲ್ಲ ಎಂದರೆ ಕೊಡುವುದು ಬೇಡ. ಅದನ್ನು ಬಿಟ್ಟು ಈ ರೀತಿ ಮಾತನಾಡುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ದೇವಸ್ಥಾನ ಕಟ್ಟಲು ಅನುಮತಿ ನೀಡಿದೆ. ಹಣ ನೀಡದ ಮನೆಗಳಿಗೆ ಯಾವುದೇ ರೀತಿಯ ಮಾರ್ಕ್ ಮಾಡುತ್ತಿಲ್ಲ, ಯಾವ ಕಾರಣಕ್ಕೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.