ಉಡುಪಿ: ಮುಖ್ಯಮಂತ್ರಿ ಮೇಲೆ ಸಾರ್ವಜನಿಕರು ದಾಳಿ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದ್ದಾರೆ. ಡಿಕೆಶಿ ಯಾವ ಇಂಟೆಲಿಜೆನ್ಸ್ ರಿಪೋರ್ಟ್ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆಶಿ ಹೇಳಿದಂತಹ ಯಾವುದೇ ಇಂಟೆಲಿಜೆನ್ಸ್ ರಿಪೋರ್ಟ್ ನಮ್ಮಲ್ಲಿಲ್ಲ. ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಬೇರೆ ಬೇರೆ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಜನರಿಂದ, ಜನರ ಮಧ್ಯದಿಂದ ಬಂದವರು. ಹೋರಾಟಗಳನ್ನು ಮಾಡಿ ಮುಖ್ಯಮಂತ್ರಿಯಾದವರು.
ಯಡಿಯೂರಪ್ಪ ಯಾವತ್ತು ಜನರ ಜೊತೆಗೆ ಇರುವವರು. ಜನರ ಮಧ್ಯೆ ಹೋಗಲು ಸಿಎಂಗೆ ಯಾವುದೇ ತೊಂದರೆ ಇಲ್ಲ. ವಿರೋಧ ಪಕ್ಷಗಳು ಹೇಳುವಂತಹ ಯಾವುದೇ ಮಾತು ಸತ್ಯ ಅಲ್ಲ. ಆತಂಕಗಳು ಏನಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಿಎಂ ಯಡಿಯೂರಪ್ಪನವರಿಗೆ ಆತಂಕ ಇಲ್ಲ ಎಂದರು.
ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂಬೈ ಪ್ರವಾಸ ವಿಚಾರ ನನಗೆ ಗೊತ್ತಿಲ್ಲ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಇಲ್ಲದಿರುವುದರಿಂದ ನಾನು ಏನೂ ಮಾತನಾಡುವುದಿಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.