ಶಿವಮೊಗ್ಗ: ಬಾರ್ ಬಳಿ ನಿಂತಿದ್ದ ಯುವಕರಿಬ್ಬರ ಮೇಲೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಾವನ್ನಪ್ಪಿದ್ದಾನೆ.
ಮೃತಪಟ್ಟ ಯುವಕನನ್ನು ಸೀಗೆಹಟ್ಟಿಯ ಜೀವನ್ (28), ಹಾಗೂ ಗಾಯಾಳು ಕೇಶವ (28) ಎಂದು ಗುರುತಿಸಲಾಗಿದೆ. ಮೃತ ಜೀವನ್ ಹಾಗೂ ಗಾಯಾಳು ಕೇಶವ ಇಬ್ಬರು ಸ್ನೇಹಿತರು. ಮೃತ ಜೀವನ್ ಡ್ಯಾನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಇನ್ನು ಕೇಶವ ಖಾಸಗಿ ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿದ್ದ.
ಜೀವನ್ ಹಾಗೂ ಕೇಶವ್ ಇಬ್ಬರು ನಿನ್ನೆ ರಾತ್ರಿ ನಗರದ ಎನ್ ಟಿ ರಸ್ತೆಯಲ್ಲಿರುವ ಬಾರ್ ವೊಂದರ ಬಳಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಅಪರಿಚಿತರ ಗುಂಪು ಏಕಾಏಕಿ ಇಬ್ಬರ ಮೇಲೆ ಚಾಕು ಇರಿದು ಪರಾರಿಯಾಗಿತ್ತು. ಮೃತ ಜೀವನ್ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡುರುವ ಕೇಶವ ಎಂಬಾತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಪೂರ್ವ ವಲಯ ಐಜಿಪಿ ಎಸ್.ರವಿ ಭೇಟಿ ನೀಡಿ ಘಟನೆ ಬಗ್ಗೆ ಗಾಯಾಳು ಕೇಶವನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಕುರಿತಂತೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಕೆಲವೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.