ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಆಶ್ರಮದ ಸ್ವಾಮಿ ಹರ್ಷಾನಂದಜೀ ಮಹಾರಾಜ್(91) ವಿಧಿವಶರಾಗಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದು ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ಚಾಮರಾಜಪೇಟೆಯ ಟಿ ಆರ್ ಮಿಲ್ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಇವತ್ತು ರಾತ್ರಿ 8 ಗಂಟೆಯವರೆಗೆ ನಾಳೆ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ಆತ್ಮ ರಾಮಕೃಷ್ಣನಲ್ಲಿಗೆ ಸೇರಲು ಗೀತ ಪಠಣ ಇತ್ಯಾದಿ ಸ್ತೋತ್ರಗಳನ್ನು ಪಠಿಸಲಾಗುತ್ತಿದೆ.
ಭಗವಂತನು ಅವರಿಗೆ ಮೋಕ್ಷವನ್ನು ಕರುಣಿಸಲಿ, ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. (2/2)
— CM of Karnataka (@CMofKarnataka) January 12, 2021
ಶ್ರೀಯುತರು 1962 ರಲ್ಲಿ ರಾಮಕೃಷ್ಣ ಮಠದ 8ನೇ ಅಧ್ಯಕ್ಷ ಸ್ವಾಮಿ ವಿಶುದ್ಧಾನಂದರಲ್ಲಿ ಸನ್ಯಾಸಿ ದಿಕ್ಷೆಯನ್ನು ಸ್ವೀಕರಿಸಿ 1989ರಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹಿಂದೂ ಧರ್ಮದ ಮೇರು ಗ್ರಂಥವಾದ ʼಕನ್ಸೈಸ್ ಎನ್ ಸೈಕ್ಲೊಪೀಡಿಯಾ ಆಫ್ ಹಿಂದೂಯಿಸಮ್ʼ ಅನ್ನು ಸುಮಾರು 26 ವರ್ಷಗಳ ಕಾಲ ರಚನೆ ಮಾಡಿದ್ದರು. ಇಂದಿಗೂ ಕೂಡ ಈ ಗ್ರಂಥ ಹಲವಾರು ಕೃತಿಗಳಿಗೆ ಆಧಾರ ಸ್ಥಂಭವಾಗಿದೆ.
ಆಧ್ಯಾತ್ಮಿಕದ ಬಗ್ಗೆ ಹಲವಾರು ಕೃತಿಗಳನ್ನ ಶ್ರೀಗಳು ರಚನೆ ಮಾಡಿದ್ದು, ಕನ್ನಡ, ಇಂಗ್ಲಿಷ್, ಸಂಸ್ಕೃತ , ಬೆಂಗಾಲಿ, ತಮಿಳು, ತೆಲುಗು ಸೇರಿದಂತೆ ಎಂಟು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುತ್ತಿದ್ದರು. ದೇಶ ಮತ್ತು ಪ್ರಪಂಚದಾದ್ಯಂತ ಇರುವ ರಾಮಕೃಷ್ಣ ಮಠದ 230 ಶಾಖಾ ಮಠಗಳನ್ನು ಶ್ರೀಯುತರು ಬಲ್ಲವರಾಗಿದ್ದರು.