ಚಿಕ್ಕಬಳ್ಳಾಪುರ: ಬರದ ನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿ, ಕೆರೆಗಳ ಕೋಡಿ ಹರಿಯಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಾರ್ಥನೆ ಅಲ್ಲಿಸಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಶ್ರೀ ಕ್ಷೇತ್ರ ಕೈವಾರ ಯೋಗಿನಾರೇಯಣ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಬಾರಿ ನಮ್ಮ ಜಿಲ್ಲೆಗಳಿಗೆ ಉತ್ತಮ ಮಳೆಯಾಗಲಿ, ನೆರೆಪೀಡಿತ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಲಿ ಎಂದು ಕೈವಾರ ತಾತಯ್ಯನವರ ದೇವಾಲಯದಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ದೇವರ ದರ್ಶನ ಪಡೆದ ಬಳಿಕ ಸಚಿವ ಸುಧಾಕರ್, ಚಿಂತಾಮಣಿ ತಾಲೂಕಿನ ಬೊಮ್ಮೇಕಲ್ಲು, ಬ್ಯಾಲಹಳ್ಳಿ ಹಾಗೂ ಚಿಕ್ಕಪುರ ಗ್ರಾಮಗಳಿಗೆ ಭೇಟಿ ನೀಡಿ 18 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿದರು. ಸಚಿವ ಸುಧಾಕರ್ ಗೆ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಾಥ್ ನೀಡಿದರು.