ರಾಯಚೂರು: ಪ್ರವಾಹದ ಮುನ್ನೆಚ್ಚರಿಕೆ ಹಿನ್ನೆಲೆ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. 20 ಜನರ ಎನ್ಡಿಆರ್ಎಫ್ ತಂಡ 4 ಬೋಟ್ಗಳೊಂದಿಗೆ ಪ್ರವಾಹ ಎದುರಿಸಲು ಜಿಲ್ಲೆಗೆ ಆಗಮಿಸಿದ್ದು, ಈಗಲೇ ತಾಲೀಮು ನಡೆಸಿದೆ. ಜಿಲ್ಲೆಯ ನದಿ ಪಾತ್ರದ 105 ಗ್ರಾಮಗಳಲ್ಲಿ ಈಗಿನಿಂದಲೇ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ಹಾಗೂ ಭೀಮಾ ನದಿಗಳಿಂದಾಗುವ ಹಾನಿ ಎದುರಿಸಲು ಪೂರ್ವ ತಯಾರಿ ನಡೆದಿದ್ದು, 34 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆ ಮಾಡಲಾಗಿದ್ದು, ಒಂದು ದಿನದ ತರಬೇತಿ ಕಾರ್ಯಾಗಾರ ಮಾಡಲಾಗಿದೆ. ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳಲ್ಲಿ ಪ್ರತಿ ವರ್ಷ ಪ್ರವಾಹ ಎದುರಾಗುತ್ತಿದ್ದು, ಈ ಮೂರು ತಾಲೂಕಿನ ನದಿ ಪಾತ್ರದ ಊರುಗಳ ಗ್ರಾಮಸ್ಥರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ.
ಜಿಲ್ಲೆಯ ನಡುಗಡ್ಡೆಯಲ್ಲಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವೃದ್ಧರು ಹಾಗೂ ರೋಗಿಗಳನ್ನು ಈಗಲೇ ಹೊರತರಲು ಅಧಿಕಾರಿಗಳು ಮುಂದಾಗಿದ್ದಾರೆ. ನಡುಗಡ್ಡೆ ಗ್ರಾಮಸ್ಥರಿಗೆ ಎರಡು ತಿಂಗಳ ಪಡಿತರ ಮುಂಚಿತವಾಗೆಯೇ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.