ಬಳ್ಳಾರಿ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಪುಟ್ಟ ಅಭಿಮಾನಿ ನಿಧನ ಹೊಂದಿದ್ದಾನೆ.
ಹೌದು. ನೂತನ ವಿಜಯನಗರ ಜಿಲ್ಲೆ ಹೊಸಪೇಟೆಯ 17 ವರ್ಷದ ವಿಕಲಚೇತನ ಬಾಲಕ ಆದರ್ಶ್ ಬುಧವಾರ ಮೃತಪಟ್ಟಿದ್ದಾನೆ. ಈತ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದು, ನಾನಾ ಕಾಯಿಲೆಗಳಿಂದ ಬಳಲುತ್ತಿದ್ದನು. ಇದೀಗ ನಿನ್ನೆ ಇಹಲೋಕ ತ್ಯಜಿಸಿದ್ದಾನೆ.
ಆದರ್ಶ್, ಅಪ್ಪು ಅಭಿನಯದ ಸಿನಿಮಾ, ಹಾಡು ಡ್ಯಾನ್ಸ್ ನೋಡಿಯೇ ಬೆಳೆದಿದ್ದಾನೆ. ಈ ಹಿಂದೆ ಪುನೀತ್ ನೋಡಲೇ ಬೇಕು ಎಂದು ಹಠ ಹಿಡಿದು ಕುಳಿತಿದ್ದ. ಹೀಗಾಗಿ ಆದರ್ಶ್ ನನ್ನು ಹೊಸಪೇಟೆಯಿಂದ ಬೆಂಗಳೂರಿನ ತಮ್ಮ ನಿವಾಸಕ್ಕೆ ಪುನೀತ್ ಕರೆಸಿಕೊಂಡಿದ್ದರು. ನಂತರ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆಂದು ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆ ಅಪ್ಪು ಮಾತನಾಡಿದ್ದರು. ಇದಲ್ಲದೆ ಅಮೆರಿಕ ಮೂಲದ ವೈದ್ಯರಿಗೂ ಪುನೀತ್ ಚಿಕಿತ್ಸೆಗೆ ಮನವಿ ಮಾಡಿದ್ದರು. ಇದನ್ನೂ ಓದಿ: ಪುಟ್ಟ ಬಾಲಕನ ಆಸೆ ಈಡೇರಿಸಿ ಆಸ್ಪತ್ರೆ ಖರ್ಚು ಭರಿಸಿದ ಅಪ್ಪು
ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದನು. ಬೇರೆ ಮಕ್ಕಳ ಹಾಗೆ ಈತನಿಗೂ ಆಟ ಆಡಬೇಕು ಶಾಲೆಗೆ ಹೋಗಬೇಕು ಎನ್ನುವ ಆಸೆಯಿತ್ತು. ಆದರೆ ಆದರ್ಶ್ ದೇಹದ ಎಲ್ಲಾ ಮೂಳೆಗಳ ಬೆಳವಣಿಗೆ ಆಗುತ್ತಿದೆ ಹೊರತು ದೇಹದಲ್ಲಿ ಮಾಂಸ ಖಂಡಗಳ ಬೆಳವಣಿಗೆ ಆಗುತ್ತಿರಲಿಲ್ಲ. ಹೀಗಾಗಿ ಈ ಪುಟ್ಟ ಬಾಲಕ ಸ್ವತಂತ್ರವಾಗಿ ಏನನ್ನು ಮಾಡಲು ಸಾಧ್ಯವೇ ಇಲ್ಲವಾಗಿತ್ತು. ಆದರೆ ಈತನ ಬುದ್ಧಿ ಮಾತ್ರ ಅತೀ ತೀಕ್ಷ್ಣವಾಗಿತ್ತು. ಇದನ್ನೂ ಓದಿ: ಪುನೀತ್ರನ್ನು ನೋಡಲು ಅಂಗೈಯಲ್ಲಿ ಜೀವ ಹಿಡಿದುಕೊಂಡು ಕುಳಿತಿದ್ದಾನೆ ಬಾಲಕ
ಆದರ್ಶ್ ಅವರ ತಂದೆ ಕಡು ಬಡವರಾಗಿದ್ದು, ಜೀವನ ನಡೆಸಲು ಆಟೋ ಇದೆ. ಇದರ ಸಂಪಾದನೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದರೆ ಹುಟ್ಟಿದಾಗಿನಿಂದಲೇ ಮಗನ ಕಾಯಿಲೆ ಕಂಡು ರಾಜ್ಯದ ಹೆಸರಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗನ ಕಾಯಿಲೆ ಮಾತ್ರ ವಾಸಿ ಆಗಿಲ್ಲ. ಹೀಗಾಗಿ ತಂದೆ-ತಾಯಿ ಸಹ ಕೈ ಚೆಲ್ಲಿದ್ದರು. ಇನ್ನು ಮಗನಿಗೆ ಪುನೀತ್ ಎಂದರೆ ಬಹಳ ಅಚ್ಚುಮೆಚ್ಚು. ಹೀಗಾಗಿ ಪುನೀತ್ ಸಿನಿಮಾ ಬಿಡುಗಡೆ ಆದರೆ ಸಾಕು ಈ ಬಾಲಕನನ್ನು ಕರೆದುಕೊಂಡು ಚಿತ್ರ ನೋಡಿಕೊಂಡು ಬರುತ್ತಿದ್ದರು.