ಬೆಳಗಾವಿ: ಆಹಾರ ಭದ್ರತೆ ಯೋಜನೆಯಡಿ ಪಡಿತರದಲ್ಲಿ ಸ್ಥಳೀಯ ಆಹಾರ ವಿತರಣೆಗೆ ಆದ್ಯತೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ, ರಾಗಿ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ಎಪ್ರಿಲ್ ಒಂದರಿಂದ ಈ ಯೋಜನೆ ಜಾರಿಗೆ ತರಲು ಯೋಜಿಸಲಾಗಿದೆ. ಇದರಿಂದ ಕಾಳಸಂತೆಗೆ ಅಕ್ಕಿ ಸರಬರಾಜು ಆಗುವುದು ತಪ್ಪಲಿದೆ ಎಂದು ತಿಳಿಸಿದರು.
ಪ್ರತಿವರ್ಷ ಪಂಜಾಬ್ ನಿಂದ ರಾಜ್ಯಕ್ಕೆ ಅಕ್ಕಿ ಸರಬರಾಜು ಆಗುತ್ತಿತ್ತು. ಕರ್ನಾಟಕದಲ್ಲೇ ಸಾಕಷ್ಟು ಭತ್ತ ಬೆಳೆಯುತ್ತಿದ್ದು, ಇಲ್ಲೇ ಖರೀದಿಸುವ ಯೋಜನೆ ಇದೆ. ಕೇಂದ್ರದ ಆಹಾರ ನಾಗರಿಕ ಸರಬರಾಜು ಸಚಿವರ ಜೊತೆಗೆ ಚರ್ಚಿಸಿ ಈ ಕುರಿತು ನಿರ್ಧರಿಸಲಾಗುವುದು. ಇದರಿಂದ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಬಹುದಾಗಿದೆ. ಕಾಳಸಂತೆಗೆ ಅಕ್ಕಿ ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಅನಧಿಕೃತ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪಡಿತರ ರದ್ಧತಿ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ತಹಶಿಲ್ದಾರ್, ಪಿಡಿಒ ಒಳಗೊಂಡ ಸಮಿತಿ ರಚಿಸಿ ಸರ್ವೆ ಮಾಡಲಾಗುವುದು. ಮಾರ್ಚ್ 31 ರೊಳಗೆ ಅನಧಿಕೃತ ಕಾರ್ಡ್ಗಳ ವರದಿ ಕೈ ಸೇರಲಿದೆ. ಬಳಿಕ ಅನಧಿಕೃತ ಪಡಿತರ ಚೀಟಿ ರದ್ದುಗೊಳಿಸಲಾಗುವುದು. ಅನಧಿಕೃತ ಪಡಿತರ ಪತ್ತೆ ಸಮರ್ಪಕವಾಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.