ರಾಯಚೂರು: ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿ ದಡದಲ್ಲಿ ಅಕ್ರಮ ಮರಳುಗಾರಿಗೆ ಅವ್ಯಾಹತವಾಗಿ ನಡೆಯುತ್ತಿದ್ದು, ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಅವರು ಬೃಹತ್ ಪಿಲ್ಲರ್ ಗಳನ್ನು ನಿರ್ಮಿಸಿ ವಾಹನಗಳು ಸಂಚರಿಸದಂತೆ ಮಾಡಿದ್ದಾರೆ.
ಗಂಜಳ್ಳಿ ಗ್ರಾಮದ ಬಳಿ ಕೃಷ್ಣಾ ನದಿ ದಡದಲ್ಲಿ ಅಕ್ರಮ ಮರಳುಗಾರಿಕೆಗೆ ನಿರ್ಮಿಸಿದ್ದ ರಸ್ತೆಯನ್ನು ಸಿಮೆಂಟ್ ಪಿಲ್ಲರ್ಗಳನ್ನು ನಿರ್ಮಿಸಿ ಅಕ್ರಮವಾಗಿ ಟ್ರ್ಯಾಕ್ಟರ್, ಟಿಪ್ಪರ್ ಗಳು ಓಡಾಡದಂತೆ ಬಂದ್ ಮಾಡಲಾಗಿದೆ. ಇನ್ನೂ ಕೆಲವೆಡೆ ರಸ್ತೆಗಳಿಗೆ ದೊಡ್ಡ ಬಂಡೆಗಳನ್ನು ಅಡ್ಡಲಾಗಿ ಹಾಕಿ ದಾರಿ ಇಲ್ಲದಂತೆ ಮಾಡಿದ್ದಾರೆ.
ಹಲವಾರು ದಿನಗಳಿಂದ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಮರಳು ಚೋರರನ್ನು ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ. ಗಂಜಳ್ಳಿ ಗ್ರಾಮದ ಬಳಿ ಕೃಷ್ಣಾ ನದಿಯಿಂದ ದಂಧೆಕೋರರು ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಗಳಲ್ಲಿ ಹಗಲು, ರಾತ್ರಿ ಮರಳು ಕದಿಯುತ್ತಿದ್ದಾರೆ. ಇದರಿಂದ ಬೇಸತ್ತ ಸಹಾಯಕ ಆಯುಕ್ತರು, ರಸ್ತೆಯನ್ನೇ ಬಂದ್ ಮಾಡಿಸಿದ್ದಾರೆ. ಹೀಗಾಗಿ ದೊಡ್ಡ ವಾಹನಗಳು ನದಿಬಳಿ ತೆರಳದಂತೆ ತಡೆಯಲಾಗಿದೆ.