– ಜನಾರ್ದನ ರೆಡ್ಡಿಗೆ ಮದ ನೆತ್ತಿಗೇರಿದೆ, ಮಾತಿನ ಮೂಲಕ ತಿವಿದ ತಂಗಡಗಿ
ಬೆಂಗಳೂರು: ಜನಾರ್ದನ ರೆಡ್ಡಿ (Janardhan Reddy) ನನ್ನನ್ನು ಏಕವಚನದಲ್ಲಿ ಸಂಬೋಧಿಸಿದ್ದಕ್ಕೆ ಹಾಗೂ ನಾನು ಸಹಾಯ ಪಡೆದಿದ್ದೇನೆ ಎಂದಿದ್ದಕ್ಕೆ ಸೇರಿ ಎಲ್ಲದಕ್ಕೂ ಎಕ್ಸ್ ಖಾತೆ ಮೂಲಕ ತಕ್ಕ ಉತ್ತರ ಕೊಟ್ಟಿದ್ದೇನೆ. ನಾನು ಯಾರ ತಂಟೆಗೂ ಹೋಗುವುದಿಲ್ಲ, ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ (Shivaraj Tangadagi) ಎಚ್ಚರಿಕೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ (Kalyana Karnataka) 79ನೇ ವರ್ಷದ ಉತ್ಸವದಲ್ಲಿ ಭಾಗಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಕುರಿತ ತಮ್ಮ ಎಕ್ಸ್ ಪೋಸ್ಟ್ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು. ಜನಾರ್ದನ ರೆಡ್ಡಿ ನನ್ನನ್ನು ಲೇ ಎಂದಿದ್ದಾರೆ. ಶಾಸಕ ಗಣೇಶ್ ಅವರನ್ನು ಅವಾಚ್ಯ ಪದ ಬಳಸಿ ದರ್ಪ ಮೆರೆದಿದ್ದಾರೆ. ಜನಾರ್ದನ ರೆಡ್ಡಿ ಅವರಿಗೆ ಮದ ನೆತ್ತಿಗೇರಿದೆ. ಜನಪ್ರತಿನಿಧಿ ಆದವರು ಒಬ್ಬರಿಂದ ಗೆಲ್ಲುವುದಿಲ್ಲ, ಇಡೀ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಗೆದ್ದಿರುತ್ತಾರೆ. ಗಣೇಶ್ ಅವರಿಗೆ ಆ ರೀತಿ ಮಾತನಾಡಿದ್ದಾರೆ ಎಂದರೆ ಅವರಿಗೆ ಮದ ನೆತ್ತಿಗೇರಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಅ.20 ರ ವರೆಗೆ ವಿಸ್ತರಣೆ
ನಾನು ಜನಾರ್ದನ ರೆಡ್ಡಿಗೆ ಲೇ ಅಂದಿಲ್ಲ. ನನಗೆ ಲೇ ಅಂದಿದ್ದಕ್ಕೆ ನನ್ನ ಅಧಿಕೃತ ಎಕ್ಸ್ ಖಾತೆ ಮೂಲಕ ಅಣ್ತಮ್ಮಾ ಎಂದೇ ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಅವರು ಎರಡು ದಿನ ತಡಕಾಡಿ ನಾನು ಹೊಗಳಿರೋ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಕಳೆದ ಆನೆಗೊಂದಿ ಉತ್ಸವದಲ್ಲಿ ಅವರು ನನ್ನ ಹೊಗಳಿದ ವಿಡಿಯೋವನ್ನೂ ಬಿಡುಗಡೆ ಮಾಡಲಿ. ನಾನು ಮಾಡಿದ ಸಹಾಯದ ಬಗ್ಗೆಯೂ ಹೇಳಲಿ. ನಾನು ವಿಡಿಯೋ ಹುಡುಕಿ ಪೋಸ್ಟ್ ಮಾಡಲ್ಲ. ನೀವೇ ಹುಡುಕಿ ಜನಾರ್ದನ ರೆಡ್ಡಿ ನನ್ನ ಹೊಗಳಿರುವುದನ್ನು ನೋಡಿ ಎಂದು ಹೇಳಿದ್ದಾರೆ.
ಯುಪಿಐ ಮೇಲೆ ಶುಲ್ಕ: ಜನಸಾಮಾನ್ಯರ ಜೇಬಿನ ಮೇಲೆ ‘ಸರ್ಜಿಕಲ್ ಸ್ಟ್ರೈಕ್’
2,000 ರು.ಗಿಂತ ಮೇಲ್ಪಟ್ಟ ಯುಪಿಐ ವಹಿವಾಟಿನ ಮೇಲೆ ಶುಲ್ಕದ ಬರೆ ಎಳೆದಿದ್ದು, ‘ಮೋದಿ ಟ್ಯಾಕ್ಸ್’ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ಜನರ ಜೇಬು ಲೂಟಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.
ನಿರುದ್ಯೋಗ, ಹಣದುಬ್ಬರ, ಆದಾಯ ಕೊರತೆಯಿಂದ ಈಗಾಗಲೇ ಜನರ ಜೇಬು ಖಾಲಿ… pic.twitter.com/mTlWsAHI17
— Shivaraj S Tangadagi (@sstangadagi) September 16, 2026
ನನ್ನ ಸಹಾಯ ನೆನಪು ಮಾಡಿಕೊಳ್ಳಲಿ. ನಾನು ನನಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದೆ. ನನ್ನ ಜಮೀನು ಮಾರಾಟ ಮಾಡಿದೆ. ಅವರ ಆಪ್ತರೊಬ್ಬರು ನನ್ನ ಜಮೀನು ಪಡೆದು ಹಣ ನೀಡಿದ್ದರು. ಅದನ್ನು ನಾನು ಹೇಳಿದ್ದೇನೆ. ಅದಕ್ಕೆ ಕನಕಗಿರಿ ಕ್ಷೇತ್ರದ ಜನರನ್ನು ನಾನೇ ಸಾಕಿದ್ದೀನಿ, ತಂಗಡಿಗೆ ನಾನೇ ಸಲುಹಿದ್ದೀನಿ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಅ.21ಕ್ಕೆ ಮಂಜಿನ ನಗರಿ ಮಡಿಕೇರಿ ದಸರಾ
ನಾನು ಮಾಡಿರುವ ಸಹಾಯದ ಬಗ್ಗೆ ನಾನು ಮಾತನಾಡಲು ಆಗುತ್ತಾ? ಇದೇ ಜನಾರ್ದನ ರೆಡ್ಡಿ ರಾಜ್ಯಸಭೆ ಚುನಾವಣೆ ವೇಳೆ ನನ್ನಿಂದ ಏನು ಸಹಾಯ ಪಡೆದಿದ್ದಾರೆ ಹೇಳಲಿ. ಇದನ್ನು ಎಕ್ಸ್ ಖಾತೆಯಲ್ಲೂ ಹಾಕಿದ್ದೇನೆ. ಅದಕ್ಕೆ ಉತ್ತರವಿಲ್ಲದೆ ಅಲ್ಲಿಗೆ ಸುಮ್ಮನಾಗಿದ್ದಾರೆ ಎಂದಿದ್ದಾರೆ.
ಕೊಟ್ಟು ಹಂಗಿಸಬೇಡ, ಕೊಟ್ಟು ಕುದಿಯಲು ಬೇಡ, ಎಷ್ಟುಂಡರೆಂದು ಅನಬೇಡ. ಇವು ಮೂರು ಮುಟ್ಯಾವ ಶಿವನ ಸದರೀಗೆ… ಇದು ನಮ್ಮ ಜನಪದರು ಕಟ್ಟಿ ಹಾಡಿದ ಜಾನಪದ ಹಾಡು. ಇದರ ಅರ್ಥ ಯಾರೇ ಆಗಲಿ ಕೊಟ್ಟ ನಂತರ ಅಯ್ಯೋ ಯಾಕೆ ಕೊಟ್ಟೆ ಅಂತಾ ಮನಸ್ಸಿನಲ್ಲಿ ಕುದಿಯಬಾರದು. ಒಂದೊಮ್ಮೆ ಅವರೇ ಬೇಡಿದಾಗ ಕೊಟ್ಟಿದ್ದರೂ, ನಂತರ ಸಮಯ ಬಂದಾಗ ಅಯ್ಯೋ ಆಗ ಕೊಟ್ಟೆನಲ್ಲ ಎಂದು ಹಂಗಿಸಬಾರದು. ಮನೆಗೆ ಊಟಕ್ಕೆ ಕೆರೆದಾಗ ಅಬ್ಬಾ ಎಷ್ಟು ಊಟ ಮಾಡಿದನಲ್ಲ ಅಂತಾ ಅಂದುಕೊಳ್ಳಬಾರದು. ಕೊಡುವುದು, ಇಡುವುದು, ಊಟ ಹಾಕಿದ್ದು ಸಾಕ್ಷಾತ್ ಶಿವನ ಪಾದಕ್ಕೆ ಸಲ್ಲಿಸಿದಂತೆ. ಒಂದೊಮ್ಮೆ ಹೀಗೆ ಹೀಯಾಳಿಸಿದರೆ ಅದು ವ್ಯರ್ಥ ಎಂಬುದು ನಮ್ಮ ಜನಪದರು ಕಂಡುಕೊಂಡ ಸತ್ಯ. ಇದನ್ನು ರೆಡ್ಡಿ ಅರ್ಥ ಮಾಡಿಕೊಂಡರೆ ಸಾಕು ಎಂದು ಹೇಳಿದ್ದಾರೆ.ಇದನ್ನೂ ಓದಿ: ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ಪೂರೈಕೆ ಸ್ಥಗಿತಗೊಳಿಸಿದ ಸೌದಿ – ಬೆಲೆ ಏರಿಕೆಯಿಂದ ಮತ್ತಷ್ಟು ಒತ್ತಡ!
ಜನರ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2,000 ರೂ. ಮೇಲ್ಪಟ್ಟು ಯುಪಿಐ ವಹಿವಾಟಿಗೆ ಶುಲ್ಕದ ಬರೆ ಎಳೆದಿದ್ದಾರೆ. ಇದು ನಮ್ಮ ದೇಶದ ಜನರು, ವರ್ತಕರ ಮೇಲಿನ ಸರ್ಜಿಕಲ್ ಸ್ಟ್ರೈಕ್. ಡಿಜಿಟಲ್ ಇಂಡಿಯಾ ಎಂದು ಜನರನ್ನು ಬರ್ಬಾದ್ ಮಾಡಿದ್ದಾರೆ. ಜನಸಾಮಾನ್ಯರಿಗೆ ಶುಲ್ಕವಿಲ್ಲ ಎನ್ನುತ್ತಾರೆ. ವರ್ತಕರಿಗೆ ಹಾಕಿದರೆ ಅವರು ಜನರೇ ಮೇಲೆ ವರ್ಗಾಯಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದರ ವಿರುದ್ಧ ಹೋರಾಡುತ್ತೀರಾ ಎಂಬ ಪ್ರಶ್ನೆಗೆ, ಪ್ರಧಾನಮಂತ್ರಿ ಮೋದಿ ಅವರಿಗೆ ಮದ ಏರಿದೆ. ಇನ್ನೂ ಕೆಲ ಅಂಧಭಕ್ತರಿಗೆ ತಮ್ಮ ತಪ್ಪಿನ ಅರಿವಾಗಿಲ್ಲ. ಜನರು ಪಶ್ತಾತಾಪ ಪಡಲು ಶುರು ಮಾಡಿದ್ದಾರೆ. ಜನರೇ ಇದರ ವಿರುದ್ಧ ಹೋರಾಡುತ್ತಾರೆ. ಪ್ರತಿಪಕ್ಷವಾಗಿ ನಾವೂ ಜೊತೆಯಾಗುತ್ತೇವೆ ಎಂದಿದ್ದಾರೆ.ಇದನ್ನೂ ಓದಿ: ನಂದಿ ಮೆಡಿಕಲ್ ಕಾಲೇಜು ಓಪಿಡಿ ಬ್ಲಾಕ್ಗೆ ಸುಧಾಕರ್ ತಾಯಿ ಹೆಸರಿಡಿ: ಪ್ರದೀಪ್ ಈಶ್ವರ್ ಮನವಿ


