ದಾವಣಗೆರೆ: ನರ್ಸ್ ಕೈಯಿಂದ ಜಾರಿ ಬಿದ್ದು ಹಸುಗೂಸು ಸಾವನಪ್ಪಿದೆ ಎಂಬ ಆರೋಪ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಳಿ ಬಂದಿದೆ.
ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅದೇ ತಾನೆ ಜನಿಸಿದ ಮಗು ಕೆಲವೇ ಸೆಕೆಂಡುಗಳಲ್ಲಿ ಸಾವನ್ನಪ್ಪಿದೆ. ನರ್ಸ್ ಬೇಜವಾಬ್ದಾರಿಯಿಂದ ಅದೇ ತಾನೇ ಜನಿಸಿದ ಮಗು ಸಾವನಪ್ಪಿದೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಸಾಕಮ್ಮಾ ಎಂಬ ಸ್ಟಾಫ್ ನರ್ಸ್ ನಿಂದ ಹೆರಿಗೆ ಮಾಡಿಸುವಾಗ ಘಟನೆ ನಡೆದಿದೆ. ವೈದ್ಯರು ಇಲ್ಲದೆ ಇದ್ದರೂ ಸಾಕಮ್ಮ ಹೆರಿಗೆ ಮಾಡಿಸುತ್ತಿದ್ದರು.
ದೇವರಹಳ್ಳಿ ಗ್ರಾಮದ ತಿಮ್ಮೇಶ್ ಮತ್ತು ಲಕ್ಷ್ಮಿ ದಂಪತಿಯ ಮಗು ಕೊನೆಯುಸಿರೆಳೆದಿದ್ದು, ಗಂಡು ಮಗುವಾಯಿತು ಅಂತ ಖುಷಿಯಲ್ಲಿದ್ದ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ದೇವರಹಳ್ಳಿ ಆಸ್ಪತ್ರೆ ಎದುರು ಜಮಾಯಿಸಿದ ಜನರು ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡರು.