ಬೆಂಗಳೂರು: ನನಗೆ 104 ವರ್ಷ ವಯಸ್ಸು ಸುಮ್ಮನೇ ಹಾಸಿಗೆ ವೇಸ್ಟ್ ಮಾಡಬೇಡಿ, ಬೇರೆ ಯುವಕರಿಗೆ ನೀಡಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ನೆನಪಿಸಿಕೊಂಡರು.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಿನ್ನೆ ಸಂಜೆ ಕರೆ ಮಾಡಿದಾಗ ಬೇರೆ ರೀತಿಯೇ ಮಾತನಾಡಿದರು. ಮಂಜುನಾಥ್ ಅವರೇ ನನಗೆ 104 ವರ್ಷ ಆಗಿದೆ. ಈ ಹಾಸಿಗೆಯನ್ನು ಬೇರೆ ಯುವಕರಿಗೆ ನೀಡಿ, ಚಿಕ್ಕ ವಯಸ್ಸಿನವರಿಗೆ ಈ ಬೆಡ್ನಲ್ಲಿ ಚಿಕಿತ್ಸೆ ನೀಡಿ, ನನ್ನನ್ನು ಯಾಕೆ ಇಲ್ಲಿ ಮಲಗಿಸಿ ಹಾಸಿಗೆ ವೇಸ್ಟ್ ಮಾಡುತ್ತಿದ್ದೀರಿ ಎಂದು ದೊರೆಸ್ವಾಮಿ ಅವರು ಹೇಳಿರುವ ಬಗ್ಗೆ ನೆನೆದರು.
ಅಯ್ಯೋ ಆ ರೀತಿ ಇಲ್ಲ, ಜಯದೇವ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಇಲ್ಲ, ಎಲ್ಲರಿಗೂ ಹಾಸಿಗೆ ಇದೆ ಎಂದು ಹೇಳಿದೆ. ಕೊರೊನಾದಿಂದ ಗುಣಮುಖರಾದ ಬಳಿಕ ಮೇ 12 ರಂದು ಡಿಸ್ಚಾರ್ಜ್ ಮಾಡಿದ್ದೆವು. ಎರಡ್ಮೂರು ದಿನ ಕಳೆದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ವಿಧಿವಶರಾದರು, ಈ ಬಾರಿ ಅವರಿಗೆ ಆತ್ಮಸ್ಥೈರ್ಯ ಕಡಿಮೆಯಾಗಿತ್ತು. ಇತ್ತೀಚೆಗೆ ಅವರ ಪತ್ನಿ ಸಹ ತೀರಿಕೊಂಡರು ಎಂದರು.
ಹಾರ್ಟ್ ಫೇಲ್ಯೂರ್ ಇಂದಾನೆ ಅವರು ಸಾವನ್ನಪ್ಪಿದ್ದಾರೆ. ಕೊರೊನಾ ಸಹ ಸ್ವಲ್ಪ ಘಾಸಿ ಮಾಡಿತು. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅವರಿಗೆ ಆಕ್ಸಿಜನ್ ಕೊಟ್ಟೇ ಇರಲಿಲ್ಲ. ಯಾವಾಗಲೂ 97-98 ಆಕ್ಸಿಜನ್ ಇರುತ್ತಿತ್ತು. ಆದರೆ ಇಂದು ಮಾತ್ರ ಕೊನೇ ಘಳಿಗೆಯಲ್ಲಿ ಆಕ್ಸಿಜನ್ ನೀಡಿದೆವು ಮತ್ತೆ ಎಂದೂ ಆಕ್ಸಿಜನ್ ನೀಡಿರಲಿಲ್ಲ ಎಂದು ಡಾ.ಮಂಜುನಾಥ್ ಅವರು ಹೇಳಿದರು.
ಸುಮಾರು 10-12 ವರ್ಷದಿಂದ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಹೃದಯದಲ್ಲಿನ ಎಡ ಭಾಗದ ಕವಚದಲ್ಲಿ ಸೋರಿಕೆ ಇತ್ತು. ಅಲ್ಲದೆ ಲಂಗ್ ಡಿಸೀಸ್ ಕೂಡ ಇತ್ತು. ಹೀಗಾಗಿ ಕಳೆದ 10 ವರ್ಷಗಳಲ್ಲಿ 10-12 ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತಿ ಬಾರಿಯೂ ನಾವು ಚಿಕಿತ್ಸೆ ಮಾಡಿ ಕಳುಹಿಸುತ್ತಿದ್ದೆವು. ಬಳಿಕ ಮನೆಗೆ ಹೋಗಿ ರೆಸ್ಟ್ ಮಾಡಿ ಎಂದರೆ ಪ್ರತಿಭಟನೆಗೆ ತೆರಳುತ್ತಿದ್ದರು. 11 ಗಂಟೆಗೆ ಡಿಸ್ಚಾರ್ಜ್ ಮಾಡಿದರೆ, ಬಳಿಕ ಟಿವಿಯಲ್ಲಿ ನೋಡಿದಾಗ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿರುತ್ತಿದ್ದರು ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.